ಹೊಸನಗರ ; ಪಟ್ಟಣದ ನಿವಾಸಿ ಹೆಚ್.ಆರ್. ಸುರೇಶ್ ಇವರಿಂದ 5 ಲಕ್ಷ ರೂಪಾಯಿ ಕೈಗಡ ಸಾಲ ಪಡೆದು ಅವರಿಂದ ಪಡೆದ ಕೈಗಡ ಸಾಲದ ತೀರುವಳಿಗಾಗಿ ಹೊಸನಗರ ತಾಲ್ಲೂಕಿನ ಸೀಗೆಕೊಪ್ಪ ವಾಸಿ ನವೀನ್ ಎನ್.ಎಸ್ 5 ಲಕ್ಷ ರೂ. ಚೆಕ್ ನೀಡಿದ್ದು ಆರೋಪಿ ಖಾತೆಯಲ್ಲಿ ಸಾಕಷ್ಟು ಹಣವಿರಲಿಲ್ಲ. ಹೀಗಾಗಿ ಚೆಕ್ ಬೌನ್ಸ್ ಆಗಿತ್ತು. ಹಾಗಾಗಿ ಹೆಚ್.ಆರ್ ಸುರೇಶ್ ಹೊಸನಗರದ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಹೊಸನಗರದ ಪ್ರಧಾನ ವ್ಯವಹಾರ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಾರುತಿಶಿಂಧೆ ಮೇ 28 ರಂದು ಆರೋಪಿಗೆ ದಂಡ ವಿಧಿಸಿದ್ದು ಆರೋಪಿಯು 5.10 ಲಕ್ಷ ರೂ. ಗಳನ್ನು ಪಾವತಿಸುವಂತೆ ಆದೇಶಿಸಲಾಗಿದೆ. 5.10 ಲಕ್ಷದ ರೂ. ಪೈಕಿ 5 ಲಕ್ಷ ರೂ.ಗಳನ್ನು ದೂರುದಾರ ಹೆಚ್.ಆರ್. ಸುರೇಶರಿಗೆ ಪಾವತಿಸುವಂತೆ ಮತ್ತು 10 ಸಾವಿರ ರೂಪಾಯಿಗಳನ್ನು ಸರ್ಕಾರಕ್ಕೆ ನೀಡುವಂತೆ ಸೂಚಿಸಿ ತೀರ್ಪು ನೀಡಿದೆ.
ದಂಡ ಪಾವತಿಸಲು ಆರೋಪಿಯು ವಿಫಲರಾದಲ್ಲಿ ಆರು ತಿಂಗಳ ಕಾಲ ಸಾಮಾನ್ಯ ಸಜೆ ಅನುಭವಿಸುವಂತೆ ಆದೇಶಿಸಲಾಗಿದೆ. ದೂರುದಾರನ ಪರವಾಗಿ ಬಿ.ಎಸ್. ವಿನಾಯಕ್ ವಾದ ಮಂಡಿಸಿದರು.

