HOSANAGARA | ಪಟ್ಟಣದ ಹೃದಯ ಭಾಗದಲ್ಲಿರುವ ಪಶು ಆಸ್ಪತ್ರೆ ಔಷಧಿ ಶೇಖರಣ ಕಟ್ಟಡದಲ್ಲಿ ಮಳೆಯಿಂದ ಸೋರುತ್ತಿದ್ದು ಔಷಧಿಗಳು ಹಾಳಾಗುತ್ತಿದ್ದು ಪಶು ವೈದ್ಯ ಇಲಾಖೆಯ ಸಿಬ್ಬಂದಿಗಳು ಔಷಧಿಗಳನ್ನು ಹಾಳಾಗದಂತೆ ಒಂದೊಂದು ಕೊಠಡಿಗೆ ವರ್ಗಾಯಿಸುತ್ತಿರುವ ಘಟನೆ ನಡೆಯುತ್ತಿದೆ.
ಹೊಸನಗರ ತಾಲ್ಲೂಕು ಪಶು ವೈದ್ಯಾಧಿಕಾರಿಗಳ ಕಛೇರಿಯಲ್ಲಿ ಸಿಬ್ಬಂದಿಗಳಿಲ್ಲದೇ ಕಾರ್ಯ ನಿರ್ವಹಿಸುವುದು ಕಷ್ಟಕರವಾಗಿದೆ. ಇಲ್ಲಿನ ಸಹಾಯಕ ವೈದ್ಯಾಧಿಕಾರಿ ನಟರಾಜ್ರವರು ವಾರಕ್ಕೆ ಎರಡು ದಿನ ಬಂದು ಸೇವೆ ಸಲ್ಲಿಸುತ್ತಿದ್ದಾರೆ. ನಿವೃತ್ತಿ ಪಡೆದಿದ್ದರೂ ಪಶು ವೈದ್ಯಾಧಿಕಾರಿ ಮಲ್ಲಿಕಾರ್ಜುನ ಸ್ವಾಮಿಯವರು ಪ್ರತಿದಿನ ಆಸ್ಪತಗೆ ಬಂದು ತುರ್ತು ಸೇವೆ ಮಾಡುತ್ತಿದ್ದಾರೆ. ತಾಲ್ಲೂಕು ಪಶು ಆಸ್ಪತ್ರೆ ಎಂಬುವುದು ಹೆಸರಿಗೆ ಮಾತ್ರ ಇದ್ದು ಇಲ್ಲಿ ಸಿಬ್ಬಂದಿಗಳಿಲ್ಲದೆ ಬರೀ ಬಾಗಿಲು ತೆಗೆದು ಜನರಿಗೆ ಮಾತ್ರ ಆಸ್ಪತ್ರೆಯಿದೆ ಎಂಬುದಷ್ಟೆ ಈ ಆಸ್ಪತ್ರೆಯ ಗತಿಯಾಗಿದೆ.
6 ಲಕ್ಷ ರೂ. ನವೀಕೃತ ಕಟ್ಟಡದಲ್ಲಿ ಒಳಗೆಲ್ಲ ನೀರು !
2023-24ನೇ ಸಾಲಿನಲ್ಲಿ ಪಶು ವೈದ್ಯಾಧಿಕಾರಿಗಳ ಹಳೇಯ ಕಟ್ಟಡದಲ್ಲಿ ಔಷಧಿಗಳನ್ನು ಶೇಖರಿಸಲು ಹಳೇ ಕಟ್ಟಡವನ್ನು ಜಿಲ್ಲಾ ಪಂಚಾಯತಿ ಅನುದಾನದಲ್ಲಿ 6 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗಿತ್ತು ಆದರೆ ಈ ವರ್ಷದ ಮಳೆಗಾಲದಲ್ಲಿ ಮಳೆ ನೀರೆಲ್ಲ ನವೀಕೃತ ಕಟ್ಟಡದ ಒಳಗಾಗಿದೆ. ನವೀಕೃತಗೊಂಡ ಆಸ್ಪತ್ರೆಯ ಪ್ರತಿ ಕೊಠಡಿಯು ಸೋರುತ್ತಿದ್ದು ಔಷಧಿಗಳನ್ನು ಇಡುವುದೆಲ್ಲಿ? ಎಂಬ ಚಿಂತೆ ಸಿಬ್ಬಂದಿಗಳದ್ದಾಗಿದೆ.

ಗುತ್ತಿಗೆದಾರರಿಗೆ ನೋಟೀಸ್ ಕೊಡಿ :
6 ಲಕ್ಷ ರೂ. ವೆಚ್ಚದಲ್ಲಿ ನವೀಕೃತಗೊಂಡ ಪಶು ಆಸ್ಪತ್ರೆಯ ಕಟ್ಟಡ ಸಂಪೂರ್ಣ ಸೋರುತ್ತಿದ್ದು 6 ಲಕ್ಷ ರೂಪಾಯಿ ನೀರಲ್ಲಿ ಹೋಮ ಮಾಡಿದಂತಾಗಿದೆ. ಸರ್ಕಾರದ ದುಡ್ಡು ಈ ರೀತಿ ಗುತ್ತಿಗೆದಾರರ ಜೇಬಿಗೆ ಇಳಿಸುವುದು ಬೇಡ ತಕ್ಷಣ ಜಿಲ್ಲಾ ಪಂಚಾಯತಿ ಇಂಜಿನಿಯರ್ ಹಾಗೂ ಅಧಿಕಾರಿ ವರ್ಗ ಗುತ್ತಿಗೆದಾರರಿಗೆ ಆಸ್ಪತ್ರೆಯ ಕಟ್ಟಡವನ್ನು ಸರಿಪಡಿಸಲು ನೋಟೀಸ್ ನೀಡಲಿ ಪಶು ವೈದ್ಯಾಧಿಕಾರಿಗಳ ಔಷಧಿ ಶೇಖರಣೆಯ ಕೊಠಡಿ ಸರಿಪಡಿಸಿ ಔಷಧಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.