ಬಡವರ ಮನೆಗೆ ಪರಿಹಾರ ಕೊಟ್ಟರೆ ನಿಮ್ಮ ಗಂಟು ಖರ್ಚಾಗುತ್ತಾ ? ; ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನೆ

Written by Mahesha Hindlemane

Published on:

ಹೊಸನಗರ : ಬಡವರ ಮನೆಗೆ ಪರಿಹಾರ ಕೊಟ್ಟರೇ ನಿಮ್ಮ ಗಂಟು ಖರ್ಚಾಗುತ್ತ.. ಬಡವರ ಮನೆ ಹಾನಿ. ಪರಿಹಾರ ಕೊಡುವಲ್ಲಿ ಹುಡುಗಾಟ ಬೇಡ. ಸುಮ್ಮನೆ ತೊಂದರೆ ಕೊಡಬೇಡಿ. ಮಳೆಯಲ್ಲಿ ಮನೆ ಕುಸಿತ ಆದಲ್ಲಿ ತಕ್ಷಣ 10 ಸಾವಿರ ಹಣ ನೀಡಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಳೆ ಹಾನಿ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ದುರಸ್ತಿ ಮತ್ತು ಪರಿಹಾರ ವಿತರಣೆ ಹಾಗೂ ಅದರಲ್ಲಿ ವಾಸಿಸುವವರಿಗೆ ಮೂಲಸೌಕರ್ಯವನ್ನು ಶೀಘ್ರಗತಿಯಲ್ಲಿ ಕಲ್ಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಜೊತೆಗೆ ಮಳೆಯಿಂದ ಮನೆಗಳಿಗೆ ಅಥವಾ ಕೃಷಿಗೆ ಆಗಿರುವ ಹಾನಿಗಳನ್ನು ಜಂಟಿ ಸಮೀಕ್ಷೆಯ ಮೂಲಕ ವರದಿ ಸಲ್ಲಿಸಿ ಹಾನಿಗೊಳಗಾದವರಿಗೆ ಸೂಕ್ತವಾದ ಪರಿಹಾರವನ್ನು ನೀಡಬೇಕು ಎಂದು ಎಚ್ಚರಿಸಿದರು.

ಕುಡಿಯುವ ನೀರು ರಸ್ತೆ ದುರಸ್ತಿ ವಿದ್ಯುತ್ ಸಂಪರ್ಕಗಳ ಕುರಿತಾಗಿ ಆಯಾ ಇಲಾಖೆ ಅಧಿಕಾರಿಗಳು ಎಲ್ಲ ಸಮಯದಲ್ಲಿಯೂ ಕಾರ್ಯ ಪ್ರವೃತ್ತರಾಗಿರಬೇಕು. ಜೊತೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯತೆಯನ್ನ ಕಾಯ್ದುಕೊಂಡರೆ ಮಾತ್ರ ನಿಮ್ಮಿಂದ ಉತ್ತಮವಾದ ಕೆಲಸವನ್ನು ನಿರ್ವಹಿಸಲು ಸಾಧ್ಯ ಎಂದು ತಿಳಿಸಿದರು.

ಅರಣ್ಯಾಧಿಕಾರಿಗಳಿಗೆ ಸೂಚನೆ :

ಯಾವುದೇ ಭೂ ಒತ್ತುವರಿ ತೆರವಿಗೆ ಮೊದಲು ನನ್ನ ಗಮನಕ್ಕೆ ತರಬೇಕು. ಮನಸ್ಸಿಗೆ ಬಂದಂತೆ ವರ್ತಿಸಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ಬಿಇಒಗೆ ಸೂಚನೆ :

ಯಾವುದೇ ಶಾಲೆಗಳ ಕಟ್ಟಡಗಳು ಸೋರುವಂತಹ ಬೀಳುವಂತೆ ಸ್ಥಿತಿಯಲ್ಲಿದ್ದಲ್ಲಿ ಅವುಗಳನ್ನು ಕೂಡಲೇ ನನ್ನ ಗಮನಕ್ಕೆ ತಂದು ದುರಸ್ತಿ ಮಾಡಬೇಕು. ಜೊತೆಗೆ ಮಳೆಗಾಲ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತ ಕ್ರಮವನ್ನು ವಹಿಸಬೇಕು. ಶಾಲಾ ದಾಖಲಾತಿಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಗ್ರಹಚಾರ ಬಿಡಿಸ್ತೇನೆ !

ಶಾಲೆ, ಅಂಗನವಾಡಿ ಮತ್ತು ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರವನ್ನು ನೀಡುವ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಶುಚಿತ್ವದ ಕಾಪಾಡಬೇಕು. ನಾನು ಭೇಟಿ ನೀಡಿದ ವೇಳೆ ದೂರು ಬಂದರೇ ನಿಮ್ಮ ಗ್ರಹಚಾರ ಬಿಡಿಸುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಭರತ್ ರಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೋಣೆ, ಪೊಲೀಸ್ ವೃತ್ತ ನಿರೀಕ್ಷಕ ಗೌಡಪ್ಪಗೌಡ, ಶಾಸಕರ ಆಪ್ತ ‌ಸಹಾಯಕ ಮಂಜು ಸಣ್ಣಕ್ಕಿ ಇದ್ದರು.

Leave a Comment