ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ

Written by Mahesha Hindlemane

Published on:

ರಿಪ್ಪನ್‌ಪೇಟೆ : ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯಾಗಿ ಮಾಡಿ. ಪೋಷಕರು ಮಕ್ಕಳನ್ನು ಓದಿಸುವುದು ಧೈರ್ಯ ಹೇಳುವುದು ಅವರ ಆಗು-ಹೋಗುಗಳ ಬಗ್ಗೆ ಗಮನಹರಿಸುವುದು. ಶಿಕ್ಷಕರು ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳಲ್ಲಿ ಆತ್ಮ ಸ್ಥೈರ್ಯವನ್ನು ತುಂಬವ ಕೆಲಸ ಮಾಡುವಂತೆ ಉಡುಪಿ ಜಿಲ್ಲೆಯ ನಿವೃತ್ತ ಉಪನಿರ್ದೇಶಕ ಕೆ.ಗಣಪತಿ ಕರೆ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆ ಶ್ರೀ ಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಶೇ.100 ಅಂಕ ಗಳಿಸುವುದೇ ಸಾಧನೆಯಲ್ಲ. ಸರ್ವ ವಿಧದಲ್ಲಿಯೂ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರಗತಿ ಹೊಂದುವ ಮೂಲಕ ಸುಸಂಸ್ಕೃತರನ್ನಾಗಿ ಬೆಳೆಸಲು ಪೋಷಕವರ್ಗ ಶಿಕ್ಷಕವರ್ಗ ಮತ್ತು ವಿದ್ಯಾರ್ಥಿ ಸಮೂಹ ಮುಂದಾಗಬೇಕು ಎಂದರು.

ಈ ಸಮಾರಂಭದ ದಿವ್ಯಸಾನಿದ್ಯವನ್ನು ಅನಂದಪುರ ಮುರುಘಾರಾಜೇಂದ್ರ ಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿ, ಮಕ್ಕಳಲ್ಲಿನ ಪ್ರತಿಭಾ ಸಾಮರ್ಥ್ಯವನ್ನು ಮಕ್ಕಳಿಗೆ ಪರಿಚಯಿಸುವುದೇ ಶಿಕ್ಷಣ. ಈ ಶಿಕ್ಷಣ ವಾತಾವರಣಕ್ಕೆ ಅಗತ್ಯ ಪೂರಕ ಪರಿಕರಗಳನ್ನು ಒದಗಿಸುವ ಗುರುತರ ಹೊಣೆಗಾರಿಕೆ ಶಾಲೆಯೊಂದಿಗೆ ಪೋಷಕರದ್ದು ಆಗಿದೆ. ಇಂದಿನ ಶಿಕ್ಷಣ ದುಬಾರಿಯಾಗುತ್ತಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಂಕ ಗಳಿಕೆ ಮಾರಕವಾಗಿದೆ.ಆ ನಿಟ್ಟಿನಲ್ಲಿ ಪೋಷಕವರ್ಗ ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕದೆ ಅವರ ಆಸಕ್ತಿಗನುಗುಣವಾಗಿ ಶಿಕ್ಷಣ ಬೋಧನೆ ಮಾಡುವಂತೆ ಸಲಹೆ ನೀಡಿದರು.

ತಾಯಂದಿರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿ, 2025-26ನೇ ಸಾಲಿನ ಪ್ರಬಂಧ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅಶೀರ್ವದಿಸಿರು.

ಶಿಕ್ಷಣ ತಜ್ಞ ಸುಧಾಕರ್, ಸಂಸ್ಥೆಯ ನಿರ್ದೇಶಕರಾದ ಹೆಚ್.ಎಂ.ಚಂದ್ರಶೇಖರಯ್ಯ, ಹೆಚ್.ಎಂ.ವರ್ತೇಶಗೌಡ, ಎಲ್.ವೈ. ದಾನೇಶಪ್ಪ, ಚಂದ್ರಪ್ಪ ಕೆ, ಮಂಜುನಾಥ ಎ.ಜಿ., ಗುರುಪ್ರಕಾಶ್ ಕೆ.ಹೆಚ್, ಮುಖ್ಯ ಶಿಕ್ಷಕ ಕೆ.ಎನ್.ಚಂದ್ರಪ್ಪ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪೋಷಕ ಶಿಕ್ಷಕ ಸಮಿತಿ ಹಾಗೂ ಮಕ್ಕಳ ಸುರಕ್ಷಾ ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಖುಷಿ ಕೆ.ಯು, ಸಾನಿಧ್ಯ ಪಾಟೀಲ್ ಪ್ರಾರ್ಥಿಸಿದರು. ನಂದನ್ ಪಿ. ಸ್ವಾಗತಿಸಿದರು. ಹೆಚ್.ಎಂ.ವರ್ತೇಶಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಬಾಂಧವ್ಯ ನಿರೂಪಿಸಿದರು. ಬಿ.ಬಿ.ಸುಮಯ್ಯ ವಂದಿಸಿದರು.

Leave a Comment