ಶಿವಮೊಗ್ಗ : ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ಸಂಯುಕ್ತಾಶ್ರಯದಲ್ಲಿ ‘ದಸರಾ ರಾಜ್ಯ ಮಟ್ಟದ ಕವಿಗೋಷ್ಠಿ’ಯನ್ನು ಆಯೋಜಿಸಲಾಗಿದ್ದು, ನಾಡಿನ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕ.ಸಾ.ಪ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ್, ವರ್ತಮಾನದ ಹಲವು ತಲ್ಲಣಗಳಿಗೆ ಕವಿಹೃದಯ ಸ್ಪಂದಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕವನಗಳಿಗೆ ಸೂಚಿಸಿರುವ ಪ್ರಮುಖ ವಿಷಯಗಳು:
ಕವಿಗಳು ಕೇವಲ ಸಾಂಪ್ರದಾಯಿಕ ವಿಷಯಗಳಿಗೆ ಸೀಮಿತವಾಗದೆ, ಪ್ರಸ್ತುತ ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ಕವನ ರಚಿಸಲು ಕೋರಲಾಗಿದೆ.
ಪ್ರಮುಖವಾಗಿ:
- ಪಶ್ಚಿಮ ಘಟ್ಟಗಳು ಮತ್ತು ಮಲೆನಾಡಿಗರ ಆತಂಕಕ್ಕೆ ಕಾರಣವಾಗಿರುವ ಕಸ್ತೂರಿ ರಂಗನ್ ವರದಿ.
- ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತ ಜನಪರ ಕಾಳಜಿ.
- ಬರದ ಕರಿನೆರಳಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಸಾಮಾನ್ಯರ ಗೋಳು ಹಾಗೂ ಸರ್ಕಾರದ ಯೋಜನೆಗಳು.
- ನಿರುದ್ಯೋಗ ಮತ್ತು ಯುವಜನರ ತಲ್ಲಣಗಳು.
- ದ್ವಿಭಾಷಾ ನೀತಿಯ ಹೆಸರಿನಲ್ಲಿ ಕನ್ನಡ ಭಾಷೆಗೆ ಆಗುತ್ತಿರುವ ಅನ್ಯಾಯ ಹಾಗೂ ಇಂಗ್ಲಿಷ್ ಭಾಷೆಯ ಭ್ರಮಾಲೋಕ.
- ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ವಂಚನೆಯ ಮುಂಚೂಣಿಯಲ್ಲಿರುವ ವಿದ್ಯಾವಂತರು.
ಈ ವ್ಯವಸ್ಥೆಯ ಕುರಿತು ಕವಿಗಳು ತಮ್ಮ ಕವನದ ಮೂಲಕ ಅಭಿವ್ಯಕ್ತಪಡಿಸುವಂತೆ ಡಿ. ಮಂಜುನಾಥ್ ಕೋರಿದ್ದಾರೆ.
ಸಾಹಿತ್ಯವೇ ಮದ್ದಾಗಲಿ:
“ಹೊಸ ತಲೆಮಾರಿಗೆ ಬದುಕಿನ ಭರವಸೆಯ ಜೊತೆಗೆ ಸೃಜನಶೀಲ ಮನಸ್ಥಿತಿಗೆ ಸಾಹಿತ್ಯವೇ ಮದ್ದಾಗಬೇಕು. ಎಳೆಯರಿಂದ ಹಿರಿಯರವರೆಗೆ ಎಲ್ಲರೂ ಬರೆಯಬೇಕು. ಕವಿಗಳು ವಿಶಿಷ್ಟವಾಗಿ ಚಿಂತಿಸಿ, ತಮ್ಮ ಕವನಗಳ ಮೂಲಕ ಅಭಿವ್ಯಕ್ತಪಡಿಸಲು ದಸರಾ ಕವಿಗೋಷ್ಠಿ ಉತ್ತಮ ವೇದಿಕೆಯಾಗಲಿದೆ. ವರ್ತಮಾನದ ಸಮಸ್ಯೆಗಳಿಗೆ ಕವಿಗಳು ಹೇಗೆ ಸ್ಪಂದಿಸುತ್ತಾರೆ ಎಂಬ ಕುತೂಹಲ ಸಾಹಿತ್ಯಾಸಕ್ತರಲ್ಲಿದೆ,” ಎಂದು ಅವರು ವಿವರಿಸಿದ್ದಾರೆ.
ಕವನ ಸಲ್ಲಿಸಲು ವಿವರಗಳು:
ಕವಿಗಳು ತಮ್ಮ ಕವನಗಳ ಜೊತೆಗೆ ಹೆಸರು, ಸಂಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
ಕಡೆಯ ದಿನಾಂಕ: ಕವನಗಳನ್ನು ಸೆಪ್ಟೆಂಬರ್ 30ರೊಳಗೆ ಕಳುಹಿಸಿಕೊಡತಕ್ಕದ್ದು.
ವಿಳಾಸ: ಡಿ. ಮಂಜುನಾಥ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಆರ್.ಟಿ.ಓ. ಕಚೇರಿ ರಸ್ತೆ, ಶಿವಮೊಗ್ಗ.

