ಹೊಸನಗರ : ಮಹಾರಾಷ್ಟ್ರದಲ್ಲಿ ಕರ್ನಾಟಕದ ಅಡಿಕೆ ಸಾಗಾಣಿಕೆ ಮಾಡಲಾಗುತ್ತಿರುವ ಅಡಿಕೆಯ ಲಾರಿಗಳನ್ನು ತಡೆಯೊಡ್ಡುವುದು ಮತ್ತು ನಿಲ್ಲಿಸುವುದು ಸೂಕ್ತವಲ್ಲ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಂ.ವಿ. ಜಯರಾಮ್ ಹೇಳಿದರು.
ಹೊಸನಗರ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ, ನಿರ್ದೇಶಕರ ಸಭೆ ನಡೆಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ನೀಡುವ ಉದ್ದೇಶದಿಂದ ಹೊಸನಗರದ ತಹಸೀಲ್ದಾರ್ ಭರತ್ರಾಜ್ರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ತೀವ್ರತರವಾದ ಅಡಿಕೆ ದರ ಕುಸಿತ ಕಂಡು ರೈತರು ಪರಿತಪಿಸುತ್ತಿರುವ ಈ ಹಂತದಲ್ಲಿ ಮಹಾರಾಷ್ಟ್ರ ಸರ್ಕಾರ ಕರ್ನಾಟಕದಿಂದ ರವಾನಿಸುತ್ತಿದ್ದ ಅಡಿಕೆ ಲಾರಿಗಳನ್ನು ತಡೆದು ನಿಲ್ಲಿಸಿ, ಅಡಿಕೆ ಬೆಲೆ ಮತ್ತಷ್ಟು ಕುಸಿಯಲು ಅವಕಾಶ ಕಲ್ಪಿಸಿದೆ. ಮಲೆನಾಡು ಭಾಗದಲ್ಲಿ ಎಲೆಚುಕ್ಕಿ ರೋಗ, ಮಳೆಯ ತೀವ್ರತರ ಹಾವಳಿ, ಇನ್ಶುರೆನ್ಸ್ ಅಸಮರ್ಪಕ ವ್ಯವಸ್ಥೆಗಳಿಂದ ರೈತರು ಸಾಕಷ್ಟು ಸಂಕಷ್ಟ ಹೊಂದಿದ್ದಾರೆ. ಈ ಹಂತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಹೊಸನಗರ ತಾಲ್ಲೂಕು ಬೆಳೆಗಾರರ ಪರವಾಗಿ ಮನವಿ ಮಾಡಿದರು.
ಮನವಿ ಪತ್ರ ನೀಡುವ ಸಂದರ್ಭದಲ್ಲಿ ಉಪಾಧ್ಯಕ್ಷ ನಿವಣೆ ನಾಗೇಶ್ ಕೆ.ಎಸ್, ಬಿ.ಎನ್ ಗುರುಮೂರ್ತಿ, ಈಶ್ವರಪ್ಪ ಬಿ, ನಾಗೇಶ್ ಕೆ.ಟಿ, ಮಹೇಂದ್ರ ಪಿ.ಸಿ, ಹೆಚ್.ಆರ್ ದೇವೆಂದ್ರಪ್ಪ, ಹೇಮಾವತಿ, ಹೂವಮ್ಮ, ನರೇಂದ್ರ, ಸತೀಶ್ ಎಂ.ಟಿ, ನಾಗೇಂದ್ರ, ನಿಜಲಿಂಗಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





