ಹೊಸನಗರ : ಎಸ್ಐಆರ್ ಜಾರಿ ಮಾಡಿರುವುದು ತಪ್ಪು ಎಂದು ಕಾಂಗ್ರೆಸ್ ಪಕ್ಷ ಹೇಳುತ್ತಿಲ್ಲ ಆದರೆ ಅತ್ಯಂತ ಕಡಿಮೆ ಕಾಲಾವಕಾಶ ನೀಡಿರುವುದರಿಂದ ದಲಿತರು-ಅಲ್ಪ ಸಂಖ್ಯಾತರ ಮತಗಳನ್ನು ಡಿಲೀಟ್ ಮಾಡಲು ವಿಶೇಷ ಆಸಕ್ತಿ ತೋರಿಸುತ್ತಿರುವುದು ಮತ್ತು ಬಿಜೆಪಿ ಮತ್ತು ಎಲೆಕ್ಷನ್ ಕಮಿಷನ್ರವರು ಒಟ್ಟಾಗಿ ಕೆಲಸ ಮಾಡುತ್ತಿರುವುದು ತಪ್ಪು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಇಲ್ಲಿನ ಗಾಂಧಿ ಮಂದಿರ (ಕಾಂಗ್ರೆಸ್ ಕಛೇರಿ)ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 130 ಕೋಟಿ ಜನರಿರುವ ದೇಶ ನಮ್ಮ ಭಾರತದ್ದು ಕಳೆದ ಚುನಾವಣೆಯಲ್ಲಿ 70 ಕೋಟಿ ಜನ ಮತದಾನ ಮಾಡಿದ್ದಾರೆ. 10-20 ವರ್ಷಗಳಾದರೂ ನಮ್ಮ ಜನ ನಮ್ಮದೇ ಆಸ್ತಿ. ಜಮೀನು ಮನೆಯಂತಹ ಖಾಸಗಿ ಸ್ವತ್ತುಗಳನ್ನೇ ನೊಂದಣಿ ಮಾಡಿಕೊಂಡಿಲ್ಲ. ಅಂತಹದರಲ್ಲಿ 2026ರ ಜೂನ್ನಿಂದ ಆಗಸ್ಟ್ 5ರ ಒಳಗೆ ದೇಶದ ನಾಗರೀಕರು ತಮ್ಮ ದಾಖಲೆಗಳನ್ನು ಕ್ರಮ ಬದ್ಧಗೊಳಿಸಿಕೊಂಡು ತಾವು ಇಲ್ಲಿಯೇ ಹುಟ್ಟಿ ಬೆಳೆದವರು. ನಮ್ಮ ಪೋಷಕರು ಇಲ್ಲಿನ ಪ್ರಜೆಗಳೇ ಎಂಬ ಅಧಿಕೃತ ದಾಖಲೆಗಳನ್ನು ಸಿದ್ಧಪಡಿಸಿ ಪೌರತ್ವ ನೋಂದಣಿ ಮಾಡಿಸಿಕೊಳ್ಳಬೇಕು. ಆಧಾರ್ ಕಾರ್ಡ್ ನಿಮ್ಮ ಗುರುತಿನ ಚೀಟಿಯೇ ಹೊರತು ಪೌರತ್ವಕ್ಕೆ ಅದು ದೃಢೀಕರಣವಲ್ಲ. ನಿಮ್ಮ ಜನನ, ವಾಸ ದೃಢೀಕರಣ ಇತ್ಯಾದಿಗಳ ದಾಖಲೆಗಳನ್ನು ಸಲ್ಲಿಸಿ ಪೌರತ್ವ ನೊಂದಣಿ ಮಾಡಿಸಿಕೊಂಡರಷ್ಟೆ ನಿಮಗೆ ಮತದಾನದ ಹಕ್ಕು ಹಾಗೂ ನೀವು ಭಾರತ ದೇಶದ ಪ್ರಜೆಯಾಗಿರಲು ಸಾಧ್ಯ ಎಂದರು.
ಮತದಾನದ ಪಟ್ಟಿ ಪರಿಷ್ಕರಣೆ ಆಗಬೇಕು ಅದಕ್ಕೆ ನಮ್ಮ ಕಾಂಗ್ರೆಸ್ ಪಕ್ಷದ ಸಹಮತವಿದೆ. ಅನರ್ಹರನ್ನು ನುಸುಳುಕೋರರನ್ನೂ ಹೊರಹಾಕಬೇಕು. ಆದರೆ ತರಾತುರಿಯಲ್ಲಿ ಭಾರದ ದೇಶದ ಪ್ರಜೆಗಳ ಮತದಾನದ ಹಕ್ಕು ತಪ್ಪಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಕಾಲಾವಕಾಶ ನೀಡಿ ಎಸ್ಐಆರ್ ಮಾಡಿ:
ಕೇವಲ ಒಂದೆರಡು ತಿಂಗಳಲ್ಲಿ ಮತದಾನ ಪರಿಷ್ಕರಣೆ ಮಾಡುವುದು ಸರಿಯಲ್ಲ. ಸುಮಾರು 130 ಕೋಟಿ ಮತದಾನದ ಪಟ್ಟಿ ಪರಿಷ್ಕರಣೆ ನಡೆಯಬೇಕು. ಅದಕ್ಕಾಗಿ ಸುಮಾರು ಆರು ತಿಂಗಳು ಒಂದು ವರ್ಷವೇ ಬೇಕಾಗುತ್ತದೆ. ಅಷ್ಟರೊಳಗೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ನಗರ ಸಭೆಗಳ ಚುನಾವಣೆ ಬರುತ್ತದೆ. ಅಷ್ಟರೊಳಗೆ ಮತದಾನ ಪರಿಷ್ಕರಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಒಂದು ಕಡೆ ಮತದಾನ ಪರಿಷ್ಕರಣೆ ನಡೆಸುತ್ತಿರಲಿ. ಆದರೆ ಎಲ್ಲರ ಮತದ ಹಕ್ಕು ಕಸಿಯುವುದು ಬೇಡ. ಪರಿಷ್ಕರಣೆ ನಡೆಸುವುದರ ಜೊತೆಗೆ ಮತದಾನದ ಹಕ್ಕು ನೀಡಲಿ ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಯವರೆಗೆ ಕಾಲಾವಕಾಶ ನೀಡಲಿ ಎಂದರು.

ಬಿಜೆಪಿ ಮತ್ತು ಆರ್ಎಸ್ಎಸ್ ಒಂದೇ ನಾಣ್ಯದ ಎರಡು ಮುಖಗಳು. ಆದರೆ ಬಿಜೆಪಿ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ವಿಂಗಡನೆಯನ್ನು ಒಟ್ಟಿಗೆ ಜಾರಿಗೆ ತರಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ವಿರೋಧಿಸಿದೆ. ನಾವು ಹಿಂದಿನಿಂದಲೂ ಮಹಿಳಾ ಮೀಸಲಾತಿ ಪರವಾನಗಿ ಇದ್ದವರು ಮಹಿಳಾ ಮೀಸಲಾತಿ ಎಂದು ಜಾರಿಗೆ ತಂದರೂ ನಮ್ಮ ಕಾಂಗ್ರೆಸ್ ಪಕ್ಷ ಸಂಪೂರ್ಣ ಒಪ್ಪಿಗೆಯಿದೆ ಎಂದರು.
ಭಾರತ ದೇಶದ ಮುಖ್ಯ ಚುನಾವಣಾ ಕಮೀಶನ್ರನ್ನು 4 ಜನರ ತಂಡ ಆಯ್ಕೆ ಮಾಡುತ್ತಿದ್ದರು. ಆದರೆ ಈಗ ನ್ಯಾಯಾಧೀಶರನ್ನು ಬಿಟ್ಟು ಪ್ರಧಾನಮಂತ್ರಿ, ಗೃಹಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರು ಆಯ್ಕೆ ಮಾಡುವ ಹಂತಕ್ಕೆ ತಲುಪಿದೆ. ಅದರಲ್ಲಿ ಇಬ್ಬರ ಬಹುಮತವಿದ್ದರೆ ಸಾಕು. ಆಯ್ಕೆ ಮಾಡಿಕೊಳ್ಳಬಹುದು ಅದಕ್ಕಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಗೃಹಮಂತ್ರಿ ಅಮಿತ್ ಶಾರವರ ಕೈಗೊಂಬೆಯಾಗಿ ಎಲೆಕ್ಷನ್ ಕಮೀಶನ್ರವರು ಕೆಲಸ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಘೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಬಿ.ಜಿ. ನಾಗರಾಜ್, ಅಶ್ವಿನಿಕುಮಾರ್, ಹೆಚ್. ಮಹಾಬಲರಾವ್, ಬಿ.ಪ್ರಭಾಕರ್, ಎರಗಿ ಉಮೇಶ್, ಬಂಡಿ ರಾಮಚಂದ್ರ, ಜಯನಗರ ಗುರು, ಬೃಂದಾವನ ಪ್ರವೀಣ್, ಜಯಶೀಲಪ್ಪಗೌಡ, ನಗರ ಕರುಣಾಕರ ಶೆಟ್ಟಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





