ರಿಪ್ಪನ್ಪೇಟೆ ; ಮುಖವಾಡಗಳೇ ವಿಜೃಂಭಿಸುತ್ತಿರುವ ಈ ಹೊತ್ತಿನಲ್ಲಿ ಅಪ್ಪಟ ಮನುಷತ್ವವನ್ನು ಕಾವ್ಯದಲ್ಲಿ ದ್ಯಾನಿಸಿದ ಮೇರು ಕವಿ ಜಿ.ಎಸ್.ಶಿವರುದ್ರಪ್ಪನವರು, ಕನ್ನಡ ಸಾಹಿತ್ಯದ ಎಲ್ಲಾ ವಿಚಾರಧಾರೆಗಳೊಂದಿಗೆ ಅನುಸಂಧಾನ ನಡೆಸುತ್ತಾ ಕನ್ನಡ ಪ್ರಜ್ಞೆಯನ್ನು ಎಚ್ಚರದಿಂದಿರಿಸಿದವರು ಜಿ.ಎಸ್.ಎಸ್. ಎಂದು ಸಾಗರ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನ ಸಹಾಯಕ ಪ್ರಾಧ್ಯಾಪಕ ಡಾ. ಸಿ. ರತ್ನಾಕರ್ ಹೇಳಿದರು.
ರಿಪ್ಪನ್ಪೇಟೆಯ ಪ್ರಥಮದರ್ಜೆ ಕಾಲೇಜ್ನಲ್ಲಿ ಆಯೋಜಿಸಲಾದ ‘ಕನ್ನಡ ವಿಭಾಗ ಭಾವ ತ್ರಿವಳಿ ಸಪ್ರೇಮ-ಸಮನ್ವಯ-ಸಾಕ್ಷಿಪ್ರಜ್ಞೆ’ ಕಾರ್ಯಕ್ರಮದಲ್ಲಿ ಡಾ.ಜಿ.ಎಸ್.ಶಿವರುದ್ರಪ್ಪನವರ ಬದುಕು ಬರಹ ಕುರಿತು ಮಾತನಾಡಿ, ಹಣತೆ ಹಂಚುವ ಕೆಲಸವೇ ಈ ಕವಿಗಳ ಜನ್ಮನ್ಯಾಸ. ಸಮನ್ವಯ ಸಾಹಿತಿಯಾಗಿದ್ದವರು. ಮುಖವಾಡ ಬದುಕಿನ ನಡುವೆ ಮನಷತ್ವವನ್ನು ಹುಡುಕಿದ ಕವಿ ಶಿವರುದ್ರಪ್ಪನವರು ಹೆಣ್ಣನ್ನು ತಮ್ಮ ಕಾವ್ಯದ ಮೂಲಕ ಉತ್ತುಂಗಕ್ಕೆ ಏರಿಸುವತ್ತ ದ್ವನಿಯಾದವರು ಆ ಕಾರಣ ಕಾಲೇಜ್ಗಳಲ್ಲಿ ಕನ್ನಡ ಸಾಹಿತ್ಯವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದ ಅವರು ಶಿವರುದ್ರಪ್ಪನವರಲ್ಲಿ ಹನ್ನೆರಡನೆಯ ಶತಮಾನದ ಬಸವಣ್ಣನವರನ್ನು ಕಂಡೆ. ಎಡ-ಬಲ ಪಂಥದವರನ್ನು ಒಟ್ಟುಗೊಡಿಸಿ ಎಲ್ಲರಲ್ಲೂ ಸಮಾನತೆಯನ್ನು ಸಾರುವುದರೊಂದಿಗೆ ಹಳ್ಳಿಯ ಮಕ್ಕಳನ್ನು ಸಾಹಿತ್ಯಾಸಕ್ತರನ್ನಾಗಿಸಿದ ಕೀರ್ತಿ ಜಿ.ಎಸ್.ಶಿವರುದ್ರಪ್ಪ ಸಲ್ಲಬೇಕು ಎಂದು ಹೇಳಿ, ಕಾವ್ಯ, ವಿಮರ್ಶೆ, ಮೀಮಾಂಸೆ, ಪ್ರವಾಸ ಕಥನಹೀಗೆ ಎಲ್ಲ ಪ್ರಕಾರಗಳಲ್ಲಿ ಅಪೂರ್ವ ಸಾಹಿತ್ಯ ಸೃಜಿಸಿ ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದರು.
ಕೆ.ಎಸ್.ನರಸಿಂಹಸ್ವಾಮಿ ಇವರ ಕವಿತೆಗಳ ಕುರಿತು ರಿಪ್ಪನ್ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ನಿರ್ವಹಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎನ್.ಎಸ್. ರಮೇಶ್ ಉಪನ್ಯಾಸ ನೀಡಿದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಪ್ರಾಚಾರ್ಯ ಪ್ರೋ.ಹೆಚ್.ಎಸ್.ವಿರೂಪಾಕ್ಷಪ್ಪ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು.
ಹೊಸದುರ್ಗ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಸಹಾಯಕ ಪ್ರಾಧ್ಯಾಪಕ ಎಂ.ಆರ್.ನರೇಂದ್ರ ಕುಳಗಟ್ಟೆ ಎಂ.ಗೋಪಾಲಕೃಷ್ಣ ಅಡಿಗ ಇವರ ಬದುಕು ಬರಹ ಕುರಿತು ಉಪನ್ಯಾಸ ನೀಡಿ, ಸಮಾಜದ ಶೋಷಣೆ ಮನಸ್ಮಿತಿಯ ಮೂಲಕ ಹೊಸ ಹೊಸ ಪದ್ಯವನ್ನು ಬರೆಯಲು ಆರಂಭಿಸುತ್ತಾರೆ. ಬರವಣಿಗೆಯಿಂದ ನವೋದಯ ಪ್ರಗತಿಶೀಲವಾಗಿ ಲೇಖನವನ್ನು ಬರೆದವರು ಗೋಪಾಲಕೃಷ್ಣ ಅಡಿಗರು. ವೈಜ್ಞಾನಿಕ ಕಾಲಘಟ್ಟದಲ್ಲಿ ಅಡಿಗರು ಕವನ ಕವಿತೆಗಳು ಮನನ ಮಾಡಿಕೊಂಡರೆ ಸಾಕು ಬದುಕು ಸಾರ್ಥಕವಾಗಲು ಸಾಧ್ಯವೆಂದರು.
ಈ ಸಂದರ್ಭದಲ್ಲಿ ಕಾಲೇಜ್ ಉಪನ್ಯಾಸಕರಾದ ಕನ್ನಡ ವಿಭಾಗ ಡಾ. ಎಂ.ಕುಮಾರ, ಇಂಗ್ಲಿಷ್ ವಿಭಾಗದ ಬಿ.ಎಲ್.ರಾಜು, ಪ್ರೋ.ಆರ್.ಕೆ.ರಾಜು, ಡಾ.ಎಸ್.ಟಿ.ರಜನಿಕಾಂತ, ಡಾ.ಟಿ.ವಿದ್ಯಾ, ಕೆ.ಆರ್.ಹರ್ಷಕುಮಾರ, ಡಾ.ಸಿ.ರಾಕೇಶ್, ಪ್ರಕಾಶ್, ಟಿ.ಅಂಜನ್ಕುಮಾರ್,
ಆರ್.ಎ. ಸುಬ್ರಹ್ಮಣ್ಯ, ಡಾ. ಜಿ. ಸೌಮ್ಯ ಹಾಜರಿದ್ದರು. ಎನ್.ಸುರೇಶ್ ಸ್ವಾಗತಿಸಿ, ನಿರೂಪಿಸಿದರು.