ರಿಪ್ಪನ್ಪೇಟೆ : ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬಾ ದೇವಿಯ ವೈಭವದ ಜಾತ್ರಾ ಮಹೋತ್ಸವಕ್ಕೆ ಭಕ್ತ ಜನಸಾಗರ ಭಕ್ತಿಯಿಂದ ಭಾಗವಹಿಸಿ ದೇವಿಗೆ ಹರಿಕೆ ಕಾಣಿಕೆ ಸಮರ್ಪಿಸಿ ಸಂಭ್ರಮಿಸಿದರು.
ಇಂದು ಮುಂಜಾನೆಯಿಂದಲೇ ದೇವಸ್ಥಾನದ ಮುಂಭಾಗ ಭಕ್ತ ಸಮೂಹ ಜಮಾಯಿಸಿ ಸರತಿ ಸಾಲಿನಲ್ಲಿ ನಿಂತು ದೇವಿಗೆ ವಿಶೇಷ ಅಲಂಕಾರ ಪೂಜೆ, ಮಹಾಮಂಗಳಾರತಿ ಪ್ರಸಾದ ವಿತರಣೆಯೊಂದಿಗೆ ಭಕ್ತರು ಹಣ್ಣು-ಕಾಯಿ ಹರಕೆ ಸಮರ್ಪಿಸಿ ತಮ್ಮ ಭಕ್ತಿಯ ಪರಾಕಾಷ್ಟೆತೆಯನ್ನು ಮೆರೆದರು.
ಈ ಜಾತ್ರಾ ಮಹೋತ್ಸವದಲ್ಲಿ ಮಸರೂರು, ಕೆಂಚನಾಲ, ಬೆಳಂದೂರು, ಲಕ್ಕವಳ್ಳಿ, ಆಲವಳ್ಳಿ, ಕಮದೂರು, ಮಾದಾಪುರ, ಹಾಲುಗುಡ್ಡೆ, ಬಾಳೂರು, ರಿಪ್ಪನ್ಪೇಟೆ, ಬೆನವಳ್ಳಿ, ಅರಸಾಳು, ಆಯನೂರು, ಹುಂಚ, ಕೋಡೂರು, ಗರ್ತಿಕೆರೆ, ಆನಂದಪುರ, ಸಾಗರ, ಹೊಸನಗರ, ಶಿವಮೊಗ್ಗ ಹೀಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಕ್ತರು ಪಾಲ್ಗೊಂಡು ದೇವಿಯ ದರ್ಶನಾಶೀರ್ವಾದ ಪಡೆದರು.

ಸಿಹಿ ತಿಂಡಿ, ಖಾರ ಮಂಡಕ್ಕಿ, ಅಂಗಡಿಗಳು ಮತ್ತು ಸ್ಟೇಷನರಿ ಸಾಮಾನುಗಳು, ಮಕ್ಕಳ ಆಟಿಕೆ ಸಾಮಗ್ರಿಗಳ ಮಾರಾಟ, ಹೂವು-ಹಣ್ಣು ಭರ್ಜರಿ ವ್ಯಾಪಾರ ಸೇರಿದಂತೆ ಹೆಣ್ಣು ಮಕ್ಕಳು, ನವಜೋಡಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಸಂತಾನ ಭಾಗ್ಯ ಮತ್ತು ಕಲ್ಯಾಣ ಭಾಗ್ಯ ಕರುಣಿಸಲೆಂದು ಮಾರಿಕಾಂಬಾ ದೇವಿಯಲ್ಲಿ ಹರಕೆ ಇಟ್ಟು ಪ್ರಾರ್ಥಿಸಿದ ದೃಶ್ಯ ವಿಶೇಷವಾಗಿತ್ತು.

