ರ್ತೀರ್ಥಹಳ್ಳಿ: ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ನಡವಳಿಕೆ ಕೆಟ್ಟದ್ದಾಗಿದ್ದು,ಸರ್ಕಾರಿ ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡುವ ಕೆಟ್ಟ ಅಭಿರುಚಿ ಅವರದ್ದಾಗಿದೆ,ಪಟ್ಟಣ ಪಂಚಾಯತಿ ಅಧಿಕಾರಿಯನ್ನು ಇತ್ತೀಚೆಗೆ ನಿಂದಿಸಿದ್ದು,ಶಾಸಕರ ವಿರುದ್ಧ ದೂರು ನೀಡಲು ಆ ಅಧಿಕಾರಿಗೆ ಹೇಳಿದ್ದೇನೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.
ಪಟ್ಟಣದ ಗಾಂಧಿಭವನದ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಸರ್ಕಾರಿ ಕಾರ್ಯಕ್ರಮಗಳ ವೇದಿಕೆಯಲ್ಲಿ ಬಿಜೆಪಿ ಪದಾಧಿಕಾರಿಗಳನ್ನು ಕೂರಿಸಿಕೊಂಡು ಮಾತನಾಡುವ ಶಾಸಕ ಜ್ಞಾನೇಂದ್ರ ರವರಿಗೆ ಸಾಮಾನ್ಯ ಜ್ಞಾನ ಇಲ್ಲವೇ?ಮೊನ್ನೆ ಜೆಸಿ ಆಸ್ಪತ್ರೆಯ ವೈದ್ಯರ ವರ್ಗಾವಣೆ ವಿಚಾರದಲ್ಲಿ ಪಕ್ಷಾತೀತ ಪ್ರತಿಭಟನೆ ಎಂದು ಹೇಳಿಕೊಂಡು ಪ್ರಚಾರದ ಗೀಳು ಅಂಟಿಸಿ ಕೊಂಡ ಇವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಕಂಡಾಕ್ಷಣ ದ್ವೇಷ,ಅಸೂಯೆ ಪಡುವ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ ಎಂದರು.
1983ರಿಂದ ಇಲ್ಲಿಯತನಕ ನಾವಿಬ್ಬರೂ ರಾಜಕೀಯದಲ್ಲಿದ್ದೇವೆ,ಯಾರು ಎಷ್ಟು ಆಸ್ತಿ, ಹಣ ಮಾಡಿದ್ದಾರೆ ಎಂಬುದರ ಬಗ್ಗೆ ಇಡಿ ತನಿಖೆಯಾಗಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಸರ್ವರನ್ನು ಎಲ್ಲಾ ಜಾತಿ, ಧರ್ಮದವರನ್ನು ಒಳಗೊಳ್ಳುವ ಸಹಬಾಳ್ವೆಯ ವಾತಾವರಣವನ್ನು ನಿರ್ಮಿಸುವುದು ಪಕ್ಷದ ಮೂಲ ತತ್ವವಾಗಿದೆ.ಆದರೆ ಬಿಜೆಪಿಯಲ್ಲಿನ ಕೇಂದ್ರ ಮತ್ತು ರಾಜ್ಯದ ಮುಖಂಡರು ಚಿಂತನ ಗಂಗ ಕೃತಿಯನ್ನು ಪ್ರತಿಪಾದಿಸುತ್ತ ದ್ವೇಷ, ಅಸೂಯೆಯನ್ನು ಸಾರುತ್ತಿದೆ. ಬಿಜೆಪಿ ಸಂವಿಧಾನ ಒಪ್ಪಿಕೊಳ್ಳಬೇಕು ಇಲ್ಲವೇ ಚಿಂತನ ಗಂಗಾ ಮತ್ತು ಕೃತಿ ಸಂಘ ರೂಪ ದರ್ಶನ ಒಪ್ಪಿಕೊಳ್ಳಬೇಕು. ದೇಶದ ಜನರನ್ನು ಗೂಳಿಯ ಹಿಂದೆ ಏನೋ ಸಿಗುತ್ತೆ ಎಂದು ಓಡುವ ನರಿಯನ್ನಾಗಿ ಮಾಡಬಾರದು, ಬಿಜೆಪಿ ತನ್ನ ಅಂತರಂಗವನ್ನು ಬಹಿರಂಗಪಡಿಸಿ ಚರ್ಚೆಗೆ ಸಿದ್ದರಾಗಬೇಕು ಎಂದು ಸವಾಲು ಹಾಕಿದರು.
ಬಿಜೆಪಿಗೆ ರಾಷ್ಟ್ರದಲ್ಲಿ 360ಸಂಸತ್ ಸದಸ್ಯರ ಆಯ್ಕೆಗೊಂಡ ದಿನ ದೇಶದ ನಮ್ಮ ಸಂವಿಧಾನವನ್ನು ತೆಗೆದು ಹಾಕಿ,ಚಿಂತನಗಂಗ ಮತ್ತು ಜನವಿರೋಧಿ,ಮನುಷ್ಯತ್ವ ಮತ್ತು ಮಾನವೀಯತೆಯ ವಿರೋಧ ಕೃತಿ ಸಂಘ ರೂಪ ದರ್ಶನ ವಿಚಾರಧಾರೆಯನ್ನು ಅನುಷ್ಠಾನ ಗೊಳಿಸುತ್ತಾರೆ. ಇಂದಿನ ಭಾರತದ ಸಂವಿಧಾನವನ್ನು ಈಗ ಬಿಜೆಪಿ ಸಮರ್ಥಿಸುವ ವಿಧಾನ,ತಮ್ಮ ಗುರಿಮುಟ್ಟುವವರೆಗಿನ ಒಂದು ತಂತ್ರಗಾರಿಕೆ, ಪ್ರಧಾನಿ ಮೋದಿಯವರು ನವಿಲಿಗೆ ಹಾಕುವ ಕಾಳಿನ ಹಾಗೆ. -ಮಾಜಿ ಸಚಿವ ಕಿಮ್ಮನೆ ರತ್ನಾಕರ್
ಈ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಚೀಂದ್ರ ಹೆಗಡೆ, ಹಾ.ಪದ್ಮನಾಭ, ವಿಶ್ವನಾಥ ಶೆಟ್ಟಿ, ಪ.ಪಂ. ಅಧ್ಯಕ್ಷ ರಹಮತ್ ಅಸಾದಿ, ಪ.ಪಂ.ಉಪಾಧ್ಯಕ್ಷೆ ಗೀತಾ ರಮೇಶ್, ಜೀನಾ ವಿಕ್ಟರ್ ಡಿಸೋಜ, ಅಮರನಾಥ ಶೆಟ್ಟಿ ಪ.ಪಂ. ಸದಸ್ಯರು ಮುಂತಾದವರಿದ್ದರು.

