ಹೊಸನಗರ ; ಹೊಸನಗರ ಕ್ಷೇತ್ರ ಹರಿದು ಹಂಚಿ ಹೋಗಿರುವುದು ನಮಗೂ ಬೇಸರವಿದೆ ಅದಕ್ಕಾಗಿಯೇ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ದೇವರ ಪ್ರಸಾದದೊಂದಿಗೆ ನಿಮ್ಮ ಹೋರಾಟಕ್ಕೆ ಸಂಪೂರ್ಣ ಆಶೀರ್ವಾದದ ಬೆಂಬಲ ನೀಡುತ್ತಿದ್ದೇವೆ ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಇಲ್ಲಿನ ರಾಮಚಂದ್ರಾಪುರ ಮಠದ ಮಹಾನಂದಿ ಗೋಲೋಕದಲ್ಲಿರುವ ಗೋವರ್ಧನ ಗಿರಿಧಾರಿ ಸನ್ನಿಧಿಯಲ್ಲಿ ಬುಧವಾರ ನಡೆದ ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವರ್ಧಂತಿ, ಗೋದೀಪ ಮಹೋತ್ಸವ ಕರ್ಯಕ್ರಮದಲ್ಲಿ ಶ್ರೀದೇವರಿಗೆ ಅಭಿಷೇಕ ಪೂಜೆ ನೆರವೇರಿಸಿ ನಂತರ ದೇವಸ್ಥಾನದ ಸನ್ನಿಧಿಯಲ್ಲಿಯೇ ಭೇಟಿಯಾದ ಹೊಸನಗರ ಕ್ಷೇತ್ರ ಪುನಃ ಸ್ಥಾಪನೆ ಹೋರಾಟ ಸಮಿತಿಯ ಮನವಿ ಆಲಿಸಿ ನಂತರ ಆಶೀರ್ವದಿಸಿದರು.

ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಆಗ ಅದಕ್ಕೆ ಬಲ ಹೆಚ್ಚು ಅಂತಹ ಒಗ್ಗಟ್ಟಿನ ನಿಮ್ಮ ಪ್ರಯತ್ನ ನಮಗೆ ತುಂಬಾ ಸಂತಸವಾಗಿದೆ, ಎಲ್ಲರೂ ಒಂದಾಗಿ ಕ್ಷೇತ್ರದ ಉಳಿವಿಗಾಗಿ ಒಂದೇ ಮನಸ್ಸಿನಿಂದ ಮುಂದಿನ ಹೆಜ್ಜೆ ಇಡಿ, ಇಂದೇ ನಮ್ಮ ಬೆಂಬಲದ ಆಶೀರ್ವದ ನೀಡುತ್ತಿದ್ದೇವೆ ಎಂದ ಅವರು, 95 ವರ್ಷ ವಯಸ್ಸಿನ ಸ್ವಾಮಿರಾಯರಂತವರು ತಾಲೂಕಿನ ಹಿತದಿಂದ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ನಿಜಕ್ಕೂ ಮಾದರಿಯಾದದ್ದು ಎಂದರು.

ಇದಕ್ಕೂ ಮುನ್ನ ವಿಷ್ಣು ಸಹಸ್ರನಾಮದ ಕುರಿತು ಉಪನ್ಯಾಸ ನೀಡಿದ ವಿದ್ವಾನ್ ವಿನಾಯಕ ಭಟ್ ಗಾಳಿಮನೆ, ವಿಷ್ಣು ಸಹಸ್ರನಾಮ ಎನ್ನುವುದು ಮನುಷ್ಯನ ಆರೋಗ್ಯಕ್ಕಿರುವ ಔಷಧವೂ ಹೌದು ಅದರ ಪಠಣದಿಂದ ಮನಸ್ಸಿನ ನೆಮ್ಮದಿ ಕಾಣಲು ಸಾಧ್ಯ ಎಂದರು. ಮಠದ ಶಾಸನತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ ಮಾತನಾಡಿ, ಮಹಾನಂದಿ ಎಂಬ ಗೋವಿನ ಕಾರಣ ಇಲ್ಲಿನ ಗೋಲೋಕ ವಿಶ್ವದಲ್ಲಿ ಮಾನ್ಯತೆ ಪಡೆಯುವಷ್ಟು ಬೆಳೆದು ನಿಂತಿತು.

ಇದಕ್ಕೂ ಮುನ್ನ ಬೆಳಗ್ಗೆ ಶ್ರೀಪೂಜೆ, ಪಾದುಕ ಪೂಜೆ ಮತ್ತು ಸೋಪಾನಪೂಜೆ ಹಾಗೂ ಪ್ರತಿಷ್ಠಾ ವರ್ಧಂತಿಯ ಧಾರ್ಮಿಕ ಕರ್ಯಕ್ರಮಗಳು, ವಿಷ್ಣು ಸಹಸ್ರನಾಮ ಪಾರಾಯಣ, ಛತ್ರ ಸಮರ್ಪಣೆ ಪಾಂಚಜನ್ಯ ಸೇವೆ, ಗೋವುಗಳಿಗೆ ಗೋಗ್ರಾಸ ಸಮರ್ಪಣೆ ಮತ್ತಿತರ ಕಾರ್ಯಕ್ರಮ ಸಂಪನ್ನಗೊಂಡಿತು. ಸಂಜೆ ಗೋದತ್ತು ದಾನಿಗಳೊಂದಿಗೆ ಸಂವಾದ, ಗೌರವ ಸಮ್ಮಾನ, ಗೋಪೂಜೆ, 1008 ಮಾತೆಯರಿಂದ ಗೋನೀರಾಜನ ಕಾರ್ಯಕ್ರಮ ನಡೆಯಿತು.

ಗೋಲೋಕದ ಗೌರವಾಧ್ಯಕ್ಷ ಜಿ.ವಿ.ಹೆಗಡೆ, ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಡಾ. ಸೀತಾರಾಮ್ ಪ್ರಸಾದ್, ಡಾ.ಎಸ್.ಆರ್. ಹೆಗಡೆ, ಕೃಷ್ಣಪ್ರಸಾದ್ ಎಡಪಾಡಿ ಮತ್ತಿತರರು ಇದ್ದರು.

ಹೊಸನಗರ ಕ್ಷೇತ್ರ ಹೋರಾಟ ಸಮಿತಿಯ ಮಾಜಿ ಶಾಸಕ ಬಿ. ಸ್ವಾಮಿರಾವ್, ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮುಖಂಡ ಎನ್.ಆರ್.ದೇವಾನಂದ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೋಣೆ ಇದ್ದರು.


