ಶಿವಮೊಗ್ಗ: ಬಿಜೆಪಿ ತನ್ನ ಮೂಲ ಸಿದ್ಧಾಂತದಿಂದ ದೂರ ಸರಿದಿದೆ ಎಂಬ ಚರ್ಚೆಗಳು ಪಕ್ಷದೊಳಗೂ ಹೊರಗೂ ನಡೆಯುತ್ತಿವೆ. ಸಂಘಟನೆಯನ್ನು ಸರಿಪಡಿಸುವ ಅಗತ್ಯವಿದೆ, ಅಧಿಕಾರದ ಆಸೆ ಸಹಜವಾದರೂ ಸಿದ್ಧಾಂತವನ್ನು ಮರೆಯಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಘಟನೆಗೆ ಮತ್ತೆ ಬರಬೇಕು ಎಂದು ನಿತ್ಯ ನೂರಾರು ಮಂದಿ ಕರೆ ಮಾಡುತ್ತಿದ್ದಾರೆ. ಸಾವಿರಾರು ಕಾರ್ಯಕರ್ತರ ತಪಸ್ಸು, ಪರಿಶ್ರಮ ಮತ್ತು ನಿಷ್ಠೆಯಿಂದ ಬೆಳೆದಿರುವ ಪಕ್ಷ ಇವತ್ತಲ್ಲ ನಾಳೆ ಖಂಡಿತ ಸರಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.
“ಬಿಜೆಪಿ ರಿಪೇರಿ ಆಗುತ್ತೆ. ಆದರೆ ಅದು ಯಾವಾಗ ಆಗುತ್ತದೆ ಎಂದು ನಾನು ದಿನಾಂಕ ಹೇಳುವುದಿಲ್ಲ. ಅದಕ್ಕೆ ಸ್ವಲ್ಪ ಸಮಯ ಬೇಕು” ಎಂದು ಈಶ್ವರಪ್ಪ ಹೇಳಿದರು.
ರಾಜಕಾರಣದಲ್ಲಿ ಸಂಪೂರ್ಣವಾಗಿ ಅಧಿಕಾರದಿಂದ ದೂರ ಉಳಿಯುವುದು ಸಾಧ್ಯವಿಲ್ಲ. ನಾನು ರಾಜಕೀಯ ಸನ್ಯಾಸಿಯಲ್ಲ. ಅವಕಾಶ ಸಿಕ್ಕರೆ ಅಧಿಕಾರವನ್ನು ಯಾರೂ ಬಿಡುವುದಿಲ್ಲ. ಅಧಿಕಾರ ಸಿಕ್ಕಾಗ ಅದನ್ನು ಜನಸೇವೆಗಾಗಿ ಬಳಸಿಕೊಳ್ಳುವುದೇ ನಿಜವಾದ ರಾಜಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಹಿರಿಯ ನಾಯಕರೊಂದಿಗೆ ನಡೆದಿರುವ ಚರ್ಚೆಗಳ ಬಗ್ಗೆ ಈಗಲೇ ಬಹಿರಂಗವಾಗಿ ಹೇಳುವುದಿಲ್ಲ. ಬರುವ ದಿನಗಳಲ್ಲಿ ಎಲ್ಲವೂ ಪ್ರಾಯೋಗಿಕವಾಗಿ ಜನರಿಗೆ ಗೊತ್ತಾಗಲಿದೆ ಎಂದು ಈಶ್ವರಪ್ಪ ಹೇಳಿದರು.
ಬಿಜೆಪಿ ಕಾರ್ಯಕರ್ತರ ಮನಸ್ಸಿನಲ್ಲಿ ಇನ್ನೂ ಪಕ್ಷದ ಬಗ್ಗೆ ಪ್ರೀತಿ ಇದೆ. ಆದರೆ ಸಂಘಟನೆ ಸಿದ್ಧಾಂತದ ದಾರಿಯಲ್ಲಿ ನಡೆಯಬೇಕೆಂಬ ನಿರೀಕ್ಷೆಯೂ ಇದೆ. ಅಧಿಕಾರಕ್ಕಾಗಿ ಮಾತ್ರ ರಾಜಕಾರಣ ನಡೆಯಬಾರದು; ಪಕ್ಷದ ಮೂಲ ಮೌಲ್ಯಗಳು ಉಳಿಯಬೇಕು ಎಂದು ಅವರು ಹೇಳಿದರು.

