ಶಿವಮೊಗ್ಗ: ಪ್ರೀತಿಸಿದ ಯುವತಿ ಬೇರೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ, ಆಕೆಯ ಭಾವಿ ಪತಿ ಹಾಗೂ ಕುಟುಂಬದವರ ಬೈಕ್ಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಪೊಲೀಸರ ವಶವಾಗಿದ್ದಾನೆ.
ಘಟನೆ ಶಿವಮೊಗ್ಗ ನಗರದ ವೆಂಕಟೇಶ ನಗರದ 5ನೇ ಕ್ರಾಸ್ನಲ್ಲಿ ನಡೆದಿದೆ. ಮಣಿ ಎಂಬಾತ ವೆಂಕಟೇಶ ನಗರದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಆತ ದುಶ್ಚಟಗಳಿಗೆ ಒಳಗಾಗಿದ್ದ ಕಾರಣ ಯುವತಿ ಆತನಿಂದ ದೂರ ಉಳಿದಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಳಿಕ ಯುವತಿಯ ಕುಟುಂಬಸ್ಥರು ಆಂಥೋನಿ ರಾಜ್ ಎಂಬುವರೊಂದಿಗೆ ಆಕೆಯ ನಿಶ್ಚಿತಾರ್ಥ ನೆರವೇರಿಸಿದ್ದರು. ಇದರಿಂದ ಆಕ್ರೋಶಗೊಂಡ ಮಣಿ, ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮಧ್ಯರಾತ್ರಿ ಯುವತಿಯ ಮನೆ ಸಮೀಪಕ್ಕೆ ಬಂದಿದ್ದಾನೆ ಎನ್ನಲಾಗಿದೆ.
ಅಲ್ಲಿ ನಿಲ್ಲಿಸಲಾಗಿದ್ದ ಆಂಥೋನಿ ರಾಜ್ ಹಾಗೂ ಯುವತಿಯ ತಮ್ಮನಿಗೆ ಸೇರಿದ ಎರಡು ಪಲ್ಸರ್ ಬೈಕ್ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕೃತ್ಯದ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆ ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಮಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಟುಂಬಕ್ಕೆ ತೊಂದರೆ ನೀಡಲು ಯತ್ನಿಸಿದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವತಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.

