ಹೊಂಬುಜ ; “ಮುತ್ತಿನಂತೆ ಪ್ರತಿಯೋರ್ವರ ಅಂತರಂಗದಲ್ಲಿ ಧರ್ಮಪ್ರಜ್ಞೆ ಪ್ರೇರಣೆ ನೀಡುವಂತಾಗಲಿ” “ಕಲ್ಮಶರಹಿತ, ನಿರ್ವಿಕಾರಭಾವದ ಮನೋಭಾವವನ್ನು ರೂಢಿಸಿಕೊಂಡು ಸುಲಲಿತ ಜೀವನ ನಿರ್ವಹಣೆ ಮಾಡುವಂತಾಗಲಿ” ಎಂದು ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಹೇಳಿದರು.

ಹೊಂಬುಜ ಆತಿಶಯ ಮಹಾಕ್ಷೇತ್ರದಲ್ಲಿ ಶರನ್ನವರಾತ್ರಿ ಪರ್ವಾಚರಣೆ ತೃತೀಯ ದಿನದಂದು ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರು ಮತ್ತು ಲೋಕವಂದ್ಯ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಜಿನಾಗಮೋಕ್ತ ಶಾಸ್ತ್ರದನ್ವಯ ಪೂಜಾ ವಿಧಿ-ವಿಧಾನಗಳು ನೆರವೇರಿದವು.

ಶ್ರೀಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ನೇತೃತ್ವ, ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಬೆಳಿಗ್ಗೆ ಕುಮುದ್ವತಿ ತೀರ್ಥದಿಂದ ಅಗ್ರೋದಕವನ್ನು ಐಶ್ವರ್ಯ ಗಜರಾಣಿಯೊಂದಿಗೆ ವಾದ್ಯಗೋಷ್ಠಿ, ಜಿನಸ್ತುತಿಯೊಂದಿಗೆ ತರಲಾಯಿತು.
ಲೇಖನವನ್ನು ಮುಂದುವರಿಸಿ ಓದಿ

ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀಕ್ಷೇತ್ರಪಾಲ ಹಾಗೂ ಶ್ರೀ ನಾಗಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಸೇವಾಕರ್ತರಾದ ಮುಂಬೈನ ಶ್ರೀಮತಿ ರೀತು ಶ್ರೀ ಸಚಿನ್ ಜೈನ್ ಉಪಸ್ಥಿತರಿದ್ದರು.ಊರ ಪರವೂರ ಭಕ್ತವೃಂದದವರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಮಾಜದವರು ಪೂಜಾ ವಿಧಾನದಲ್ಲಿ ಮುತ್ತಿನ ಸರ್ವಾಲಂಕಾರಭೂಷಿತ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪುಷ್ಪ-ಫಲ-ನೈವೇದ್ಯ ಸಮರ್ಪಿಸಿ, ಭಕ್ತವೃಂದದವರು ಧನ್ಯತಾಭಾವ ತಳೆದರು.


