ಹೊಸನಗರ ; ಇಲ್ಲಿನ ಚೌಡಮ್ಮ ರಸ್ತೆ, ಎಸ್.ಬಿ.ಐ ಮುಂಭಾಗ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿನ ಪಟ್ಟಣ ಪಂಚಾಯತಿಗೆ ಸೇರಿದ ಹಲವು ಮಳಿಗೆಗಳ ಮಾಸಿಕ ಬಾಡಿಗೆ ನಿಗದಿತ ಸಮಯಕ್ಕೆ ಪಾವತಿ ಆಗದೆ, ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ಸದಸ್ಯರು ಬಾಡಿಗೆ ವಸೂಲಿಗೆ ಅಗತ್ಯ ಕ್ರಮ ವಹಿಸ ಬೇಕು ಎಂಬ ಒಕ್ಕೊರಲಿನ ಧ್ವನಿಗೆ ಮುಖ್ಯಾಧಿಕಾರಿ ಎಂ.ಎನ್.ಹರೀಶ್ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗವು ಮಿಂಚಿನ ಕಾರ್ಯಾಚರಣೆ ನಡೆಸಿ ಹಲವು ಮಳಿಗೆಗೆ ಬೀಗ ಮುದ್ರೆ ಹಾಕಿ, ಎಚ್ಚರಿಕೆಯ ನೋಟಿಸ್ ಅಂಟಿಸಿದೆ. ಕೆಲವು ಬಾಡಿಗೆದಾರರು ಸ್ಥಳದಲ್ಲೇ ಚಾಲ್ತಿ ಮಾಸದ ತನಕ ಬಾಡಿಗೆ ಬಾಕಿ ಪಾವತಿಸಿದರೆ, ಇನ್ನೂ ಕೆಲವು ಸ್ವಲ್ಪ ನಗದು ಹಾಗು ಬಾಕಿಯನ್ನು ಚೆಕ್ ಮೂಲಕ ನೀಡಿದರು.
ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/16BUb3W8rK/
ವಸೂಲಾತಿ ವೇಳೆ ಸಿಬ್ಬಂದಿ ಹಾಗು ಬಾಡಿಗೆದಾರರ ನಡುವೆ ಕೆಲವು ಮಾತಿನ ಚಕಮಕಿ ನಡೆಯಿತು. ಕಟ್ಟದ ಸೋರುತ್ತಿದೆ ದುರಸ್ತಿ ಮಾಡಿಸಿ ಎಂದು ಅನೇಕ ಬಾರಿ ಪಂಚಾಯತಿಗೆ ಮನವಿ ಸಲ್ಲಿಸಿದ್ದರು ಕ್ರಮಕೈಗೊಂಡಿಲ್ಲ. ಆದರೆ, ಬಾಡಿಗೆ ವಸೂಲಿಗೆ ದಂಡುಕಟ್ಟಿ ಬರುತ್ತಾರೆ ಎಂಬ ಆಕ್ಷೇಪ ವ್ಯಕ್ತಪಡಿಸಿದರು.
ಮಳೆಗಾಲ ಆರಂಭಕ್ಕೂ ಮುನ್ನ ಕಟ್ಟಡ ದುರಸ್ತಿಗೊಳಿಸಿ. ತಪ್ಪಿದಲ್ಲಿ ಕಚೇರಿ ಎದುರು ಸಾಮೂಹಿಕ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಬಾಡಿಗೆದಾರ ವಾದಿರಾಜ್ ನೀಡಿದರು.

ಇದಕ್ಕೆ ಮುಖ್ಯಾಧಿಕಾರಿ ಹರೀಶ್, ಮೊದಲು ಬಾಕಿ ಬಾಡಿಗೆ ಪಾವತಿಸಿ. ಮುಂದೆ ಕಟ್ಟಡ ದುರಸ್ತಿಗೆ ಕ್ರಮಕೈಗೊಳ್ಳೊಣ ಎಂಬ ಭರವಸೆಯ ಮೂಲಕ ಸಂತೈಸಿದರು.
ಟೆಂಡರ್ ದಾರರು ಹೆಚ್ಚಿನ ಬಾಡಿಗೆ ಆಸೆಗೆ ಬೇರೆಯವರಿಗೆ ಒಳ ಬಾಡಿಗೆ ನೀಡಿರುವ ಸಂಗತಿ ಇದೇ ಸಂದರ್ಭದಲ್ಲಿ ಬೆಳಕಿಗೆ ಬಂತು. ಒಟ್ಟಾರೆ ಸುಮಾರು 40 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಬಾಡಿಗೆ ಹಣ ಬಾಕಿ ಇದ್ದು, ಶುಕ್ರವಾರ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಸುಮಾರು 2.50 ಲಕ್ಷ ರೂ. ನಗದು ಹಾಗೂ 9 ಲಕ್ಷ ರೂ. ಮೌಲ್ಯದ ಬಾಡಿಗೆ ಚೆಕ್ ಮೂಲಕ ವಸೂಲಿಯಾಗಿತ್ತು.

ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ಮಂಜುನಾಥ, ಕರ ವಸೂಲಿಗಾರ ಪರಶುರಾಮ, ಸಿಬ್ಬಂದಿ ನಾಗರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.