ರಿಪ್ಪನ್ಪೇಟೆ ; ನಾಡಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮುಂಬಾರು ಸಮೀಪದ ಹಿರಿಯೋಗಿ ಗ್ರಾಮದಲ್ಲಿ ನಡೆದಿದೆ.

ದೇವರಾಜ (47) ಮೃತ ದುರ್ದೈವಿ. ಹಿರಿಯೋಗಿ ಗ್ರಾಮದ ತನ್ನ ಮನೆಯಲ್ಲಿ ರಾತ್ರಿ ಮೆಟ್ಟಿಲು ಹತ್ತುವಾಗ ಕೈಯಲ್ಲಿದ್ದ ಬಂದೂಕಿನ ಟ್ರಿಗರ್ ಆಕಸ್ಮಿಕವಾಗಿ ಎಳೆದು ಗುಂಡು ಹಣೆಗೆ ತಗುಲಿ ಮೃತಪಟ್ಟಿದ್ದಾರೆ.

ರಾತ್ರಿ ಪತ್ನಿ ಅಡುಗೆ ತಯಾರಿಸುತ್ತಿದ್ದು, ಮಕ್ಕಳು ಕೋಣೆಯಲ್ಲಿ ಓದುತ್ತಿರುವಾಗ ಮನೆ ಮುಂಭಾಗದಿಂದ ಗುಂಡಿನ ಸದ್ದು ಕೇಳಿ ಬಂದಿದೆ. ಹೊರಬಂದು ನೋಡಿದಾಗ ದೇವರಾಜ ರಕ್ತಸಿಕ್ತವಾಗಿ ಬಿದ್ದಿದ್ದು, ಪಕ್ಕದಲ್ಲಿ ಕೋವಿಯೂ ಇತ್ತು. ದೇವರಾಜ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

