ಸಾಗರ:ತಾಲ್ಲೂಕು ಬಾರಂಗಿ ಹೋಬಳಿ ಕಾನೂರು ಗ್ರಾಮದ ರೈತ ರಾಮಪ್ಪ ಜಟ್ಟನಾಯ್ಕ (60) ಅವರ ಮೇಲೆ ಕಾಡುಹಂದಿ ದಾಳಿ ನಡೆಸಿರುವ ಘಟನೆ ನಡೆದಿದೆ. ದಾಳಿಯ ತೀವ್ರತೆಯ ನಡುವೆಯೂ ರೈತ ಪ್ರಾಣಾಪಾಯದಿಂದ ಪಾರಾಗಿರುವುದು ಅಚ್ಚರಿಯ ಸಂಗತಿಯಾಗಿ ಪರಿಣಮಿಸಿದೆ.
ಘಟನೆ ವಿವರ
ಸಾಗರ ತಾಲ್ಲೂಕಿನ ಬಾರಂಗಿ ಹೋಬಳಿಯ ದುರ್ಗಮ ಪ್ರದೇಶ ಕಾನೂರು ಗ್ರಾಮದ ರೈತ ರಾಮಪ್ಪ ಜಟ್ಟನಾಯ್ಕ ರ ಮೇಲೆ ಕಾಡು ಹಂದಿ ದಾಳಿ ನಡೆಸಿದೆ. ದಾಳಿಯ ತೀವ್ರತೆ ಯಾವ ಪ್ರಮಾಣ ಇತ್ತು ಎಂದರೆ ಅರವತ್ತು ವರ್ಷದ ನಾಯ್ಕರು ಬದುಕಿ ಬಂದಿದ್ದೆ ಹೆಚ್ಚು. ಹರಿತವಾದ ಕೋರೆಗಳಿಂದ ಹೊಟ್ಟೆ ಭಾಗಕ್ಕೆ ಇರಿದ ಪರಿಣಾಮ ಘಟನೆ ನಡೆದ ಜಾಗದಲ್ಲಿ ಕುಸಿದು ಬಿದ್ದ ರಾಮನಾಯ್ಕರನ್ನ ಸಾಗರ ಆಸ್ಪತ್ರೆ ಕರೆ ತಂದು ಗಂಭೀರ ಗಾಯ ಕಾರಣ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಈಗ ಕೋಟೇಶ್ವರ್ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತ ಇದ್ದಾರೆ.
ಆಸ್ಪತ್ರೆಗೆ ಸ್ಥಳಾಂತರ
ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾದ ಗಾಯಾಳು ರೈತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಗಾಯಗಳ ತೀವ್ರತೆಯನ್ನು ಗಮನಿಸಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕ (ICU) ಗೆ ಸ್ಥಳಾಂತರಿಸಲಾಗಿದೆ.
ನೆರವಿಗೆ ಮನವಿ
ಈ ಘಟನೆಯ ನಂತರ ಸ್ಥಳೀಯ ಸಾಮಾಜಿಕ ಹೋರಾಟಗಾರ ಜಿಟಿ ಸತ್ಯನಾರಾಯಣ ಅವರು ರಾಜ್ಯ ಅರಣ್ಯ ಸಚಿವ ಈಶ್ವರ್ ಖಾಂಡ್ರೆ (@aranya_kfd) ಇವರಿಗೆ ಮನವಿ ಸಲ್ಲಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ ರೈತನ ಚಿಕಿತ್ಸೆಗಾಗಿ ಸರ್ಕಾರ ಹಾಗೂ ಅರಣ್ಯ ಇಲಾಖೆ ತಕ್ಷಣ ನೆರವಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಗ್ರಾಮಸ್ಥರ ಆತಂಕ
ಕಾನೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡುಹಂದಿಗಳ ದಾಳಿಯ ಆತಂಕ ಹೆಚ್ಚುತ್ತಿರುವುದರಿಂದ ರೈತರು ಭಯಭೀತರಾಗಿದ್ದಾರೆ. ಬೆಳೆಗಾರರ ಜೀವ ಹಾಗೂ ಬೆಳೆಗಳಿಗೆ ಭದ್ರತೆ ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ.

