ತೀರ್ಥಹಳ್ಳಿ ; ತಾಲೂಕಿನ ಕೋಣಂದೂರು ಸಮೀಪದ ಮಂಗಳ ಗ್ರಾಮದ ಜನಪರ ವೈದ್ಯರತ್ನ, ನಾಟಿ ವೈದ್ಯ ಎಂ.ಬಿ ಶಿವಣ್ಣಗೌಡ ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕಳೆದ ನಾಲ್ಕೈದು ದಶಕಗಳಿಂದ ಪಾರಂಪರಿಕ ನಾಟಿ ವೈದ್ಯ ವೃತ್ತಿಯಲ್ಲಿ ಪ್ರಚಾರವಿಲ್ಲದೇ ಯಶಸ್ಸು ಕಂಡ ಮಂಗಳ ಶಿವಣ್ಣಗೌಡ ವಯೋಸಹಜ ಕಾಯಿಲೆಯಿಂದ ಇಂದು ಮುಂಜಾನೆ 4:45 ಕ್ಕೆ ಕೊನೆಯುಸಿರೆಳೆದರು.
ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಸಮೀಪದ ರಾಮನಸರ ಮಂಗಳ ಇಂದು ರಾಜ್ಯದಲ್ಲೇ ಹೆಸರು ಪಡೆದುಕೊಂಡಿದೆ. ಪಾರಂಪರಿ ನಾಟಿ ಔಷಧಿ ನೀಡುತ್ತಾ ಸಾವಿರಾರು ಜನರ ಬದುಕಿಗೆ ಆಶಾಕಿರಣರಾಗಿದ್ದ ಮಂಗಳದ ಶಿವಣ್ಣ ಗೌಡರು ತಮ್ಮ ಇಳಿವಯಸ್ಸಿನಲ್ಲು ಹುಮ್ಮಸ್ಸಿನಿಂದ ಸೇವೆ ಮಾಡುತ್ತ ಕೈ-ಕಾಲು ಮುರಿತ, ಬೆನ್ನುನೋವು ಮೂಳೆ ನೋವುಗಳಿಗೆ ಇವರು ನಾಟಿ ಔಷಧಿಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಜನರು ಇವರ ಔಷಧಿಗೆ ಮಾರುಹೋಗಿದ್ದರು.

ಇವರ ಪುತ್ರ ಶ್ರೀಕಾಂತ್ ಕೂಡ ನಾಟಿ ವೈದ್ಯರಾಗಿದ್ದು ಇವರ ಜೊತೆ ಸೇವೆಯಲ್ಲಿ ನೆರವಾಗುತಿದ್ದರು. ಸಮಾಜದ ಅನೇಕ ಪ್ರತಿಷ್ಠಿತರು ಇವರ ಸೇವೆ ಪಡೆದುಕೊಂಡಿದ್ದಾರೆ.
ಮಾಜಿ ಸಚಿವೆ ಮನೋರಮ ಮದ್ವರಾಜ್, ಪತ್ರಕರ್ತೆ ಗೌರಿ ಲಂಕೇಶ್, ಸಾಹಿತಿಗಳಾದ ಚಂದ್ರಶೇಖರ್ ಕಂಬಾರ್, ಮಾಜಿ ಡಿಸಿಎಂ ಈಶ್ವರಪ್ಪನವರು ಹಾಗೂ ಹೊರ ರಾಜ್ಯಗಳ ಹಾಗೂ ಹೊರರಾಷ್ಟ್ರದ ಜನರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿರವರು ಇವರ ಸೇವೆಯನ್ನು ಮೆಚ್ಚಿದ್ದರು.
ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತಿನಿಂದ ಜಾನಪದ ವೈದ್ಯರತ್ನ ಪ್ರಶಸ್ತಿ, ಹಿರೇಕೆರೂರು ಸ್ವಾಮಿಗಳಿಂದ ಸನ್ಮಾನ ಬಹಳಷ್ಟು ಸಂಘ ಸಂಸ್ಥೆಗಳ ಸನ್ಮಾನ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿದೆ.