ಮಾರುತಿಪುರ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶಂಕರಶೆಟ್ಟಿ ಕಚ್ಚಿಗೆಬೈಲು ವಿಧಿವಶ !

Written by Mahesha Hindlemane

Updated on:

ಹೊಸನಗರ ; ತಾಲ್ಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ, ಕಚ್ಚಿಗೆಬೈಲು ಕ್ಷೇತ್ರದ ನಿಕಟಪೂರ್ವ ಗ್ರಾ.ಪಂ ಸದಸ್ಯ ಶಂಕರಶೆಟ್ಟಿ (65) ನಿಧನರಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಶಂಕರಶೆಟ್ಟಿ ಮೃತಪಟ್ಟಿದ್ದಾರೆ.

ಕಡು ಬಡತನದ ತುಂಬು ಕುಟುಂಬದಲ್ಲಿ 1961ರ ಜ. 06ರಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಚ್ಚಿಗೆಬೈಲಿನಲ್ಲಿ ಪೂರೈಸಿ ಆರ್ಥಿಕ ಸಂಕಷ್ಟದಿಂದಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ದೂರದ ಆಂಧ್ರಪ್ರದೇಶದಲ್ಲಿ ಹೋಟೆಲ್ ಕೆಲಸಕ್ಕೆ ಸೇರಿಕೊಂಡರು ನಂತರ ಹೊಸನಗರದ ಹಳೆ ಬಸ್ ನಿಲ್ದಾಣದಲ್ಲಿದ್ದ ಹೋಟೆಲ್ ಒಂದರಲ್ಲಿ ಕೆಲ ಕಾಲ ಪ್ರಯಾಣಿಕರಿಗೆ ಸೇವೆ ನೀಡಿದ ನಂತರ ಮಾಸ್ತಿಕಟ್ಟೆಯಲ್ಲಿ ಸಹ ಸೇವೆ ನೀಡಿ ನಂತರ ತಮ್ಮ ಮೂಲ ಸ್ಥಳವಾದ ಕಚ್ಚಿಗೆಬೈಲಿನಲ್ಲಿ ಚಿಕ್ಕದಾದ ಹೋಟೆಲ್ ಉದ್ಯಮದೊಂದಿಗೆ ವಿವಿಧ ದಿನ ಪತ್ರಿಕೆಗಳ ವಿತರಕರಾಗಿದ್ದರು.

ಸಾಮಾಜಿಕ ಸೇವೆ ;

ತನ್ನ ಹೋಟೆಲ್ ಪಕ್ಕದಲ್ಲೇ ಇರುವ ಬಸ್ ನಿಲ್ದಾಣವನ್ನು ಅಲಂಕರಿಸಿ ಪ್ರತಿದಿನ ಸ್ವಚ್ಚಗೊಳಿಸುವುದು ಇವರ ದೈನಂದಿನ ಕಾರ್ಯವಾಗಿತ್ತು. ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಸ್ಪರ್ಧಿಸಿ ಕ್ಷೇತ್ರದ ಮತದಾರರ ಆಶಿರ್ವಾದದಿಂದ ಪ್ರಚಂಡ ಬಹುಮತದಿಂದ ಗೆದ್ದು ಸದಸ್ಯರಾಗಿ ನಂತರ ಮಾರುತಿಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು, ತಮ್ಮ ಆಡಳಿತದ ಅವಧಿಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರು. ತಾನು ಅಕ್ಷರ ಕಲಿತ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಬಟ್ಟೆಮಲ್ಲಪ್ಪದಲ್ಲಿ ಭಂಟರ ಯಾನೆ ನಾಡವರ ಸಂಘದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.

ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು, ಬಂಧು-ಬಳಗವನ್ನು ಅಗಲಿದ್ದಾರೆ.

ಸಂತಾಪ ;

ಶಂಕರಶೆಟ್ಟಿ ನಿಧನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಬಿ. ಸ್ವಾಮಿರಾವ್, ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿ.ಪಂ. ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಹೊಸನಗರ ತಾ.ಪಂ. ಮಾಜಿ ಸದಸ್ಯೆ ನೇತ್ರಾವತಿ ಕಾಪಿ ಗೋಪಾಲ್ ಹಾಗೂ ಮಾರುತಿಪುರ ಗ್ರಾ.ಪಂ. ನಿಕಟಪೂರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ತೀವ್ರ ಸಂತಾಪ ಸೂಚಿಸಿದ್ದಾರೆ‌.

Leave a Comment