ಶಿವಮೊಗ್ಗ

ಮೀಟರ್ ರೀಡಿಂಗ್‌ಗೆ ತೆರಳಿದ್ದ ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ – ಜೀವ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ

ಶಿವಮೊಗ್ಗ:ವಿದ್ಯುತ್ ಮೀಟರ್ ರೀಡಿಂಗ್ ಕಾರ್ಯನಿರ್ವಹಿಸುತ್ತಿದ್ದ ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ ಮಾಡಿ, ಜೀವ ಬೆದರಿಕೆ ಒಡ್ಡಿದ ಘಟನೆ ಶಿವಮೊಗ್ಗ ನಗರದ ವೆಂಕಟೇಶನಗರದಲ್ಲಿ ನಡೆದಿದೆ.

ಮೆಸ್ಕಾಂನ ಮೀಟರ್ ರೀಡರ್ ಆಗಿ ಕೆಲಸ ಮಾಡುತ್ತಿರುವ ಅಶ್ವಥ್. ಹೆಚ್.ಟಿ. ಅವರು ನಿಯಮಿತವಾಗಿ ಮನೆಗಳಿಗೆ ತೆರಳಿ ವಿದ್ಯುತ್ ಮೀಟರ್ ರೀಡಿಂಗ್ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಶ್ವಥ್ ಅವರು ವೆಂಕಟೇಶನಗರದ ಮನೆಯೊಂದರ ಗೇಟ್ ತೆರೆದು ಒಳಗೆ ಹೋಗಿ ಮೀಟರ್ ರೀಡಿಂಗ್ ಮಾಡುತ್ತಿದ್ದಾಗ, ಆ ಮನೆಯಿಂದ ವ್ಯಕ್ತಿಯೊಬ್ಬ ಹೊರಬಂದು “ಅನುಮತಿ ಇಲ್ಲದೆ ಒಳಗೆ ಬಂದಿದ್ದೀಯ” ಎಂದು ಆಕ್ರೋಶ ವ್ಯಕ್ತಪಡಿಸಿ, ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದರೆಂದು ಆರೋಪಿಸಲಾಗಿದೆ.

ಸಾಕ್ಷಿಗಳ ಪ್ರಕಾರ, ಆರೋಪಿಯು “ದೀಪಾವಳಿಗಿಂತ ಮೊದಲು ನಿನಗೆ ದೀಪ ಹಿಡಿಸುತ್ತೇನೆ” ಎಂಬ ಶಬ್ದಗಳಿಂದ ಮೆಸ್ಕಾಂ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ.

ಘಟನೆಯ ನಂತರ ಅಶ್ವಥ್ ಅವರು ತಕ್ಷಣವೇ ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

ಮೆಸ್ಕಾಂ ಅಧಿಕಾರಿಗಳು ಈ ಘಟನೆಯನ್ನು ಖಂಡಿಸಿ, ಸರ್ಕಾರಿ ನೌಕರರು ಕರ್ತವ್ಯನಿರ್ವಹಿಸುವ ವೇಳೆ ಹಲ್ಲೆ ಅಥವಾ ಅಡ್ಡಿಪಡಿಸುವಂತಹ ಕೃತ್ಯಗಳು ಕಾನೂನುಬಾಹಿರವಾಗಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಮೆಸ್ಕಾಂ ಸಿಬ್ಬಂದಿ ತಮ್ಮ ಸುರಕ್ಷತೆಗಾಗಿ ಪೊಲೀಸರ ಸಹಕಾರದ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.

ಬಾಲ್ಯವಿವಾಹ ನಿಯಂತ್ರಣಕ್ಕೆ ಸಮುದಾಯದ ಮುಖಂಡರು ಗಮನಹರಿಸಬೇಕು: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

Leave a Comment