ತೀರ್ಥಹಳ್ಳಿ

ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸುಭದ್ರ ದೇಶ ಕಟ್ಟಲು ಸಾಧ್ಯ: ಸಂಸದ ಬಿ.ವೈ.ರಾಘವೇಂದ್ರ

ತೀರ್ಥಹಳ್ಳಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಸ್ವಾವಲಂಬನೆ ಬಲಿಷ್ಠ ಮತ್ತುಸುಭದ್ರ ದೇಶವನ್ನು ನಿರ್ಮಾಣ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ.ಹೊಸ ಶಿಕ್ಷಣ ನೀತಿಯೊಂದಿಗೆ ಜಾತಿಭೇದ ಮರೆತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶೇ.10ಮೀಸಲಾತಿ ನೀಡಿ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

 ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ವತಿಯಿಂದ ತೀರ್ಥಹಳ್ಳಿ ತಾಲೂಕಿನ ಒಂದರಿಂದ ನಾಲ್ಕನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ನೀಡಲಾದ ಬ್ಯಾಗ್ ಮತ್ತು ಸ್ವಟರ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ವತಿಯಿಂದ ಈ ಸೌಲಭ್ಯ ಒದಗಿಸುತ್ತಿದ್ದೇನೆ. ಸರ್ಕಾರಿ ಶಾಲೆಯ ಒಂದರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ ನೀಡಲಾಗುತ್ತಿದೆ. ನಮ್ಮ ಜಿಲ್ಲೆಗೆ 60,000 ಸ್ವಟರ್ ಗಳ ವಿತರಣೆ ಆಗುತ್ತವೆ.ತೀರ್ಥಹಳ್ಳಿ ತಾಲೂಕಿನಲ್ಲಿ 3000 ಮಕ್ಕಳಿಗೆ ಸ್ವಟರ್ ವಿತರಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ ಕಾರ್ಯ ಮಾಡಲು ಹೊರಟಿದ್ದೇವೆ. ನಮ್ಮ ಸರ್ಕಾರಿ ಶಾಲೆಯ ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಏನೇನು ಸೌಲಭ್ಯ ಇದೆ ಅದನ್ನು ತಲುಪಿಸುವ ಕಾರ್ಯ ಆಗಬೇಕಾಗಿದೆ ಎಂದರು.

ಹಿಂದೆ ಶಿಕ್ಷಕರಿಗೆ ಎರಡು ಮೂರು ತಿಂಗಳಿಗೆ ಒಮ್ಮೆ ಸಂಬಳ ಬರುತ್ತಿತ್ತು ಆದರೆ ಇವತ್ತು ಅದಕ್ಕೆ ಯಾವುದೇ ಕೊರತೆ ಇಲ್ಲ. ಅಜಿಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ನಮ್ಮ ರಾಜ್ಯ ಸರ್ಕಾರದ ಸರ್ಕಾರಿ ಶಾಲೆ ಮಕ್ಕಳಿಗೆ 10,000 ಕೋಟಿ ಅನುದಾನವನ್ನು ನೀಡಿರುತ್ತಾರೆ. ಈ ಯೋಜನೆ ಅಡಿಯಲ್ಲಿ ಮೊಟ್ಟೆ ನೀಡಲಾಗುತ್ತಿದೆ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಒಳ್ಳೆಯ ಯೋಜನೆ ಜಾರಿಗೆ ತಂದಿದೆ ಸರ್ಕಾರ ಇದನ್ನ ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಶಿವಮೊಗ್ಗ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಲಾಗುತ್ತಿದೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ರಾಜ್ಯದಲ್ಲಿ ಯಾವ ಜಿಲ್ಲೆಗೂ ಬಾರದ ಸೌಲತ್ತುಗಳನ್ನು ನಮ್ಮ ಜಿಲ್ಲೆಗೆ ಸಂಸದರು ತಂದು ಕೊಟ್ಟಿದ್ದಾರೆ. ಇದು ಕೇವಲ ಉತ್ತರ ಭಾರತದಲ್ಲಿ ಬಳಕೆಯಾಗುತ್ತಿತ್ತು. ಬಹಳ ಜನ ರೈಲು ಬಿಡುವವರು ಇದ್ದರು ಆದರೆ ನಮ್ಮ ಸಂಸದರು ರೈಲನ್ನು ತಂದಿದ್ದಾರೆ. ಇವತ್ತು ಯಾರು ಒಳ್ಳೆ ಕೆಲಸ ಮಾಡಿದ್ದರು ಅದನ್ನು ಹೇಳಲೇಬೇಕಾಗಿರುವುದು ನಮ್ಮ ಕರ್ತವ್ಯ ಎಂದರು.

ಇಂದು ಹಳ್ಳಿಯ ಸರ್ಕಾರಿ ಶಾಲೆಯನ್ನು ಮೇಲೆತ್ತುವ ಕೆಲಸ ಆಗುತ್ತಿದೆ. ಒಂದು ಶಾಲೆ ಮುಚ್ಚುತ್ತದೆ ಎಂದರೆ ನಮಗೆ ಹೊಟ್ಟೆ ಉರಿಯುತ್ತದೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯದಿದ್ದರೆ ಶಾಲೆಗಳು ಮುಚ್ಚುತ್ತವೆ ಎಂದು ನಾನು ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಇದರ ಪರಿಣಾಮವಾಗಿ 30 ಪ್ರಾಥಮಿಕ ಶಾಲೆಗಳು ಮತ್ತು 5 ಸರ್ಕಾರಿ ಪ್ರೌಢಶಾಲೆಗಳಿಗೆ ಇಂಗ್ಲಿಷ್ ಮೀಡಿಯಂ ತೆರೆಯಲು ಅನುಮತಿ ನೀಡಲಾಗಿದೆ ಎಂದರು.

ವೇದಿಕೆಯಲ್ಲಿ ಪ.ಪಂ.ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ,ಉಪಾಧ್ಯಕ್ಷೆ ಗೀತಾ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ಉಪಸ್ಥಿತರಿದ್ದು ಮಾತನಾಡಿದರು.

ಹೊಸನಗರ: ಮೂಕಾಂಬಿಕ ಅಭಯಾರಣ್ಯದ ಜಲಪಾತ ವೀಕ್ಷಣೆಗೆ ಅಕ್ರಮ ಪ್ರವೇಶ ನಿಷಿದ್ಧ

Leave a Comment