ಗ್ಯಾರಂಟಿ ಯೋಜನೆಯ ಒಂದು ಭಾಗವಾದ ಗೃಹಲಕ್ಷ್ಮಿಗೆ ಸರ್ಕಾರದ ಸುತ್ತೋಲೆ ಬರುವವರೆಗೆ ಜೀವಂತ ಪ್ರಮಾಣ ಪತ್ರದ ಅಗತ್ಯವಿಲ್ಲ ; ಚಿದಂಬರ

Written by Mahesha Hindlemane

Published on:

ಹೊಸನಗರ : ಕರ್ನಾಟಕದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದ ಸುತ್ತೋಲೆ ಬರುವವರೆಗೆ ಜೀವಂತ ಪ್ರಮಾಣಪತ್ರದ ಅಗತ್ಯವಿಲ್ಲವೆಂದು ಹೊಸನಗರ ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಹೆಚ್.ಬಿ. ಚಿದಂಬರ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಗ್ಯಾರಂಟಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಮಾರು ಒಂದು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಜೀವಂತ ಪ್ರಮಾಣಪತ್ರ ಮಾಡಿಸಬೇಕೆಂದು ತಮ್ಮ ಕೆಲಸವನ್ನು ಬಿಟ್ಟು ಓಡಾಟ ನಡೆಸುತ್ತಿದ್ದು ಸಮಿತಿಯ ಗಮನಕ್ಕೆ ಬಂದಿದ್ದು ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಜೀವಂತ ಪ್ರಮಾಣಪತ್ರ ಬೇಕು ಎಂಬ ಆದೇಶ ಬಂದಿರುವುದಿಲ್ಲ. ಗ್ಯಾರಂಟಿ ಯೋಜನೆ ಫಲಾನುಭವಿಗಳು ಸರ್ಕಾರದ ಸುತ್ತೋಲೆ ಬರುವವರೆಗೆ ತಮ್ಮ ಖಾತೆಗೆ ಎಂದಿನಂತೆ ಸರ್ಕಾರದ ಹಣ ಎರಡು ಸಾವಿರ ಬರುತ್ತದೆ ಎಂದು ಸಭೆಗೆ ತಿಳಿಸಿದರು.

ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ನೀಡಲು ಸಭೆಯಲ್ಲಿ ನಿರ್ಣಯ ;

ಸರ್ಕಾರದ ಗ್ಯಾರಂಟಿಯ ಯೋಜನೆಯ ಒಂದು ಭಾಗವಾದ ಶಕ್ತಿ ಯೋಜನೆ ಹೊಸನಗರ ತಾಲ್ಲೂಕಿನಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ವಿರಳವಾಗಿರುವುದರಿಂದ ತಕ್ಷಣ ಜಾರಿಗೆ ಬರುವಂತೆ ಕೆಎಸ್‌ಆರ್‌ಟಿಸಿ ಡಿಪೋ ಹೊಸನಗರದಲ್ಲಿ ತೆರೆಯಬೇಕು ಹಾಗೂ ಸಾಗರ-ಶಿವಮೊಗ್ಗ-ತೀರ್ಥಹಳ್ಳಿ-ಕುಂದಾಪುರ ಮಾರ್ಗಕ್ಕೆ ಕೆಂಪು ಬಸ್‌ಗಳನ್ನು ಬಿಡಬೇಕೆಂದು ಸಭೆಯ ನಡುವಳಿಯಲ್ಲಿ ದಾಖಲಿಸುವುದರ ಜೊತೆಗೆ ಡಿಪೋ ಸ್ಥಳ ಗುರುತಿಸಬೇಕೆಂದು ಸೂಚಿಸಲಾಯಿತು.

ಮೂರು ನ್ಯಾಯಬೆಲೆ ಅಂಗಡಿಗಳಿಗೆ ಸದಸ್ಯರ ಉಸ್ತುವಾರಿ ;

ಹೊಸನಗರ ತಾಲ್ಲೂಕಿನಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರದಲ್ಲಿ ಜನರಿಗೆ ವ್ಯತ್ಯಾಸ ಮಾಡಲಾಗುತ್ತಿದೆ ಸರಿಯಾದ ಅಕ್ಕಿ ನೀಡುತ್ತಿಲ್ಲ ಎಂದು ದೂರುಗಳ ಬಂದ ಕಾರಣದಿಂದ ಪ್ರತಿಯೊಂದು ಗ್ರಾಮ ಹೋಬಳಿಗಳಲ್ಲಿ ಮೂರು-ಮೂರು ನ್ಯಾಯಬೆಲೆ ಅಂಗಡಿಗಳಿಗೆ ಒಬ್ಬರಂತೆ ಗ್ಯಾರಂಟಿ ಯೋಜನೆಯ ಸದಸ್ಯರನ್ನು ನೇಮಿಸಬೇಕೆಂದು ತಹಸೀಲ್ದಾರ್‌ರವರಿಗೆ ತಿಳಿಸಿ ನಿರ್ಣಯ ಕೈಗೊಳ್ಳಲಾಯಿತು.

ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 29011 ಪಡಿತರ ಕಾರ್ಡ್‌ದಾರರಿದ್ದು ಅದರಲ್ಲಿ 28522 ಕಾರ್ಡ್‌ದಾರರು ಗ್ಯಾರಂಟಿ ಯೋಜನೆಗೆ ಭಾಗಿನರಾಗಿದ್ದಾರೆ. ಇತ್ತಿಚೇಗೆ 56 ಮಹಿಳೆಯರು ಹೊಸ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸಲಾಗಿದ್ದು 36 ಮಹಿಳೆಯರು ಗ್ಯಾರಂಟಿ ಯೋಜನೆಗೆ ನೊಂದಾವಣೆ ಮಾಡಲಾಗಿದೆ ಎಂದು ಸಭೆಯಲ್ಲಿ ಅಧ್ಯಕ್ಷ ಚಿದಂಬರ ತಿಳಿಸಿದ್ದು ಹೊಸನಗರ ತಾಲ್ಲೂಕಿನಲ್ಲಿ 98% ಯೋಜನೆಗಳು ಜಾರಿಯಲ್ಲಿದೆ ಎಂದು ತಿಳಿಸಿದರು.

ಈ ಸಭೆಯಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಸಮಿತಿಯ ಸದಸ್ಯರಾದ ನರಸಿಂಹ ಪೂಜಾರಿ, ಸುಮಂಗಲ ದೇವರಾಜ್, ಅಕ್ಷತಾ ನಾಗರಾಜ್, ಪೂರ್ಣಿಮಾ ಸಂತೋಷ್, ಅನಿಲ್‌ಕುಮಾರ್, ಕರುಣಾಕರ, ಅಮೀರ್ ಹಂಜಾ, ಸಿಂಥಿಯಾ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Leave a Comment