ಚಿಕ್ಕಮಗಳೂರು ಜಿಲ್ಲೆಯಲ್ಲಿ 7ಕ್ಕೇರಿದ ಮಂಗನ ಕಾಯಿಲೆ ಸೋಂಕಿತರ ಸಂಖ್ಯೆ, ಹೆಚ್ಚಿದ ಆತಂಕ

Written by malnadtimes.com

Updated on:

ಚಿಕ್ಕಮಗಳೂರು ; ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದು, ನಿನ್ನೆ ಮತ್ತೊಂದು ಪ್ರಕರಣ ದಾಖಲಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 7 ಕ್ಕೆ ಏರಿಕೆಯಾಗಿದ್ದು, ಈ ಮಾರಣಾಂತಿಕ ರೋಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

WhatsApp Group Join Now
Telegram Group Join Now
Instagram Group Join Now

ಈ ಬಾರಿ ಆರಂಭದಲ್ಲೇ ತೀವ್ರ ಸ್ವರೂಪ ಪಡೆದಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಮತ್ತಿಖಂಡ‌ ಗ್ರಾಮದ 25 ವರ್ಷದ ಯುವಕನಲ್ಲಿ ಮೊದಲು ಕೆಎಫ್‌ಡಿ ಕಾಣಿಸಿಕೊಂಡಿತ್ತು. ಆ ನಂತರ ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಜನರಲ್ಲಿ ಮಂಗನ ಕಾಯಿಲೆ ಕಾಣಸಿಕೊಂಡಿದ್ದು ಆತಂಕ ಸೃಷ್ಟಿ ಮಾಡಿದೆ.

ಎನ್​.ಆರ್ ಪುರ ಗ್ರಾಮದ ಮೇಲ್ಪಾಲ್ ಗ್ರಾಮದಲ್ಲೇ ಮೂರು ಜನರಲ್ಲಿ ಕೆಎಫ್​ಡಿ ಕಾಣಿಸಿಕೊಂಡಿದೆ. ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಫ್​ಡಿ ವಾರ್ಡ್ ತೆರೆಯಲಾಗಿದೆ. ಕಳೆದ‌ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ 132 ಜನರಲ್ಲಿ ಕೆಎಫ್​ಡಿ ಕಾಣಿಸಿಕೊಂಡು ನಾಲ್ವರು ಮೃತಪಟ್ಟಿದ್ದರು.

ಕಾಡಂಚಿನ ತಾಲೂಕುಗಳಾದ ಚಿಕ್ಕಮಗಳೂರು, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ತನ್ನ ರುದ್ರರೂಪ ತಾಳುವ ಮುನ್ನವೇ ಆರೋಗ್ಯ ಇಲಾಖೆ ‌ಕೆಎಫ್​ಡಿ ಅಲರ್ಟ್ ಘೋಷಣೆ ಮಾಡಿ‌ದೆ.

ಮಂಗನ ಕಾಯಿಲೆ‌ ಪತ್ತೆಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ ಹೋಬಳಿ ಮತ್ತಿಖಂಡ‌ ಗ್ರಾಮದಲ್ಲಿ ಉಣ್ಣೆಗಳನ್ನ ಸಂಗ್ರಹ ಮಾಡಲಾಗಿದ್ದು, ಅರಣ್ಯದಲ್ಲಿ ಮಂಗಗಳು ಸಾವನ್ನಪ್ಪಿರುವ ಕುರಿತು ಮಾಹಿತಿ ಸಂಗ್ರಹ ಮಾಡಲಾಗಿದೆ.

ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ, ಎನ್​ಆರ್ ಪುರ ತಾಲೂಕಿನ ಮೇಲ್ಪಾಲ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಮನೆ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಅರಣ್ಯಗಳಿಗೆ ತೆರಳದಂತೆ ಎಚ್ಚರಿಕೆ ನೀಡುತ್ತಿದೆ.

ಕಳೆದ ಏಳೆಂಟು ವರ್ಷಗಳಲ್ಲಿ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳದ ಮಂಗನ ಕಾಯಿಲೆ 2024 ರಲ್ಲಿ ತನ್ನ ರೌದ್ರರೂಪ ತಾಳಿತ್ತು. ಮಲೆನಾಡಿನ ತಾಲೂಕುಗಳಲ್ಲಿ ಜೀವ ಭಯ ತರಿಸಿತ್ತು. ಈ ಮಂಗನ ಕಾಯಿಲೆ ಮಹಾಮಾರಿ ಇದೀಗ ಮತ್ತೆ ಸದ್ದಿಲ್ಲದೆ ವಕ್ಕರಿಸುತ್ತಿದ್ದು, ಜನರು ಬಹಳಷ್ಟು ಜಾಗರೂಕತೆ ವಹಿಸಬೇಕಿದೆ.

Leave a Comment