ರಿಪ್ಪನ್ಪೇಟೆ ; ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಳವಾರ ಸಂಜೆ ವರ್ಷದ ಮೊದಲ ಮಳೆ ಸುರಿದಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪೆರೆದಂತಾಯಿತು.
ರಿಪ್ಪನ್ಪೇಟೆ, ಹುಂಚ, ಕೋಡೂರು, ಗರ್ತಿಕೆರೆ, ಹುಂಚ ರೋಡ್, ಕೋಟೆತಾರಿಗ, ಹುಗುಡಿ, ಕರಿಗೆರಸು, ಹಿಂಡ್ಲೆಮನೆ, ಚಿಕ್ಕಜೇನಿ, ಗವಟೂರು, ಮಳಲಿಕೊಪ್ಪ, ಹೆದ್ದಾರಿಪುರ, ಜಂಬಳ್ಳಿ, ಕಲ್ಲುಕೊಪ್ಪ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಉತ್ತಮವಾಗಿ ಮಳೆ ಸುರಿದಿದೆ.
ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ಸಂಜೆ 4:30ರ ವೇಳೆ ದಿಢೀರ್ ಆಗಿ ಸುರಿದ ಮಳೆಯಿಂದಾಗಿ ಜನರ ಓಡಾಟಕ್ಕೆ ತೊಂದರೆಯಾಯಿತು. ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದರು.
ಲೇಖನವನ್ನು ಮುಂದುವರಿಸಿ ಓದಿ
ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರು ಸಂತಸಗೊಂಡಿದ್ದಾರೆ. ರಣ ಬಿಸಿಲಿನಿಂದ ಕಂಗೆಟ್ಟು ಅಡಿಕೆ, ಕಾಳುಮೆಣಸು, ಕಬ್ಬು, ಬಾಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬೆಳೆಗಾರರು ಮೊದಲ ಮಳೆಯಿಂದ ಖುಷಿಪಟ್ಟಿದ್ದಾರೆ. ಹಲವೆಡೆ ಮನೆ ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆ, ಕಾಳುಮೆಣಸು ಮಳೆಯಿಂದ ನೆನೆಯುವಂತಾಯಿತು.

