ರಿಪ್ಪನ್ಪೇಟೆ ; ಮನುಷ್ಯನ ದುರಾಸೆಯಿಂದಾಗಿ ಅರಣ್ಯ ನಾಶವಾಗುತ್ತಿದ್ದು ಇರುವ ಜಾಗದಲ್ಲಿ ಗಿಡ-ಮರಗಳನ್ನು ಬೆಳೆಸುವ ಮೂಲಕ ಪ್ರಕೃತಿ ಪರಿಸರವನ್ನು ಉಳಿಸಿ ಶುದ್ಧ ಗಾಳಿಯನ್ನು ಪಡೆಯುವುದರೊಂದಿಗೆ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಬೆಳಕು ಕಲ್ಪಿಸಲು ಸಾಧ್ಯವೆಂದು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಕರೆ ನೀಡಿದರು.

ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮಳೂರು ಗ್ರಾಮದ ಸ್ವಗ್ರಾಮ ಹಿತರಕ್ಷಣಾ ವೇದಿಕೆ ಹಾಗೂ ಸಾಗರ ಸಾಮಾಜಿಕ ಅರಣ್ಯ ವಲಯ ಸಾಗರ ಮತ್ತು ಅರಣ್ಯ ಇಲಾಖೆ ಉಪವಿಭಾಗ ಹೊಸನಗರ ಇವರ ಸಂಯುಕ್ತಾಶ್ರಯದಲ್ಲಿ ಮಳೂರು ಗ್ರಾಮದ ಶ್ರೀ ಮಹೇಶ್ವರ ಕ್ರೀಡಾಂಗಣ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸ್ವಗ್ರಾಮ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಸಂಘಟನೆಯ ಸರ್ವ ಸದಸ್ಯರು ಗಿಡಗಳನ್ನು ನೆಡುವುದಲ್ಲದೆ ಪಾಲನೆ ಪೋಷಣೆ ಮಾಡುವುದರೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗಿಡನೆಟ್ಟು ಸಾಮಾಜಿಕ ಕಾರ್ಯದಲ್ಲಿ ತೊಡಗುವಂತೆ ಸಂಕಲ್ಪ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಈ ವಾರ್ಡ್ನ ಸದಸ್ಯರು ಮತ್ತು ಸಾಮಾಜಿಕ ಆರಣ್ಯ ಇಲಾಖೆಯ ಡಿ.ಆರ್.ಎಫ್.ದೊಡ್ಮನಿ, ಅಂಜನೇಯ, ಹಾಲೇಶ ಮತ್ತು ಸಿಬ್ಬಂದಿ ವರ್ಗ ಮತ್ತು ಸ್ವಗ್ರಾಮ ಹಿತ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಸತೀಶ ಈರನಬೈಲು, ಚಂದ್ರಶೇಖರ, ಸತೀಶ ಪಿ, ನವೀನ, ಇನ್ನಿತರ ಪದಾಧಿಕಾರಿಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.

