ಹೊಸನಗರ ; ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ತಿಳಿಸಿದರು.
ಇಲ್ಲಿನ ಗಾಯಿತ್ರಿ ಮಂದಿರದಲ್ಲಿ ಬುಧವಾರ ತಾಲೂಕು ಬಿಜೆಪಿ ಮಂಡಲ ಏರ್ಪಡಿಸಿದ್ದ ವಿಶ್ವಾಸ ಅಭಿವೃದ್ಧಿ-ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೂರನೇ ಬಾರಿ ಮೋದಿ ಪ್ರಧಾನಿಯಾದ ಬಳಿಕ ದೇಶದ ಸಮಗ್ರ ಅಭಿವೃದ್ಧಿಗಾಗಿ ಸಾವಿರಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸಬ್ ಕಾ ಸಾಥ್ ಸಬ್ ಕ ವಿಕಾಸ್ ಘೋಷಣೆಯಡಿಯಲ್ಲಿ ದೂರದೃಷ್ಠಿ ಚಿಂತನೆ ಹೊಂದಿದ ಪ್ರಗತಿಪರ ಯೋಜನೆಗಳನ್ನು ರೂಪಿಸಿದ್ದಾರೆ. ಜಾತಿ, ಮತ, ಪಂಥಗಳ ಬೇಧಬಾವವಿಲ್ಲದಂತೆ ಯೋಜನೆಗಳ ಫಲ ತಲುಪುವಂತೆ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ 56 ವಿಮಾನ ನಿಲ್ದಾಣಗಳಿತ್ತು. ಇಂದು 158ಕ್ಕೆ ಏರಿಕೆಯಾಗಿದೆ. ಕೋಟ್ಯಂತರ ರೂ. ಅನುದಾನದಲ್ಲಿ ದೇಶದ ವಿವಿಧೆಡೆ ಬೃಹತ್ ಸೇತುವೆ, ರೈಲ್ವೆ ಮಾರ್ಗ ನಿರ್ಮಾಣ, ಹೆದ್ದಾರಿ ಅಭಿವೃದ್ಧಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ದೇಶದ ರಕ್ಷಣಾ ವ್ಯವಸ್ಥೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಹತ್ವ ನೀಡಿದ್ದು, ಇಡೀ ವಿಶ್ವವೇ ಭಾರತದತ್ತ ಮುಖ ಮಾಡುವಂತಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಬಿ.ಸ್ವಾಮಿರಾವ್, ಪ್ರಧಾನಿ ಮೋದಿ ದೇಶ ಕಂಡ ಅತ್ಯುತ್ತಮ ನಾಯಕ. ಇವರ ಆಡಳಿತಾವಧಿಯಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಜನತೆಯಲ್ಲಿ ಆಶಾದಾಯಕ ಭಾವನೆ ಮೂಡಿಸಿದೆ ಎಂದರು.
ವೇದಿಕೆಯಲ್ಲಿ ಮಂಡಲದ ಅಧ್ಯಕ್ಷ ಎನ್.ಸತೀಶ್, ಪ್ರಮುಖರಾದ ಎನ್.ಆರ್.ದೇವಾನಂದ, ಉಮೇಶ ಕಂಚುಗಾರ್, ಎ.ವಿ.ಮಲ್ಲಿಕಾರ್ಜುನ, ಆಯನೂರು ಪದ್ಮಿನಿ ರಾವ್, ಬಿ ಯುವರಾಜ್, ಕಲ್ಯಾಣಪ್ಪಗೌಡ, ಗಣಪತಿ ಬೆಳಗೋಡು, ಸುರೇಶ್ ಸಿಂಗ್, ಶ್ರೀಪತಿರಾವ್, ಮಂಡಾನಿ ಮೋಹನ, ಮಂಜುನಾಥ್ ಸಂಜೀವ, ಸತ್ಯನಾರಾಯಣ, ನಾಗಾರ್ಜುನ್, ಮತ್ತಿತರರು ಇದ್ದರು.
ಜನಸಂಘ ಹಾಗೂ ಪಕ್ಷಕ್ಕಾಗಿ ಹಿಂದೆ ಶ್ರಮಿಸಿದ ಹಿರಿಯ ಕಾರ್ಯಕರ್ತರನ್ನು ಹಾಗೂ ಹೊಸನಗರ ತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಸಮಾಜ ಸೇವೆ ಮಾಡುತ್ತಿರುವ ಕೆಲವರನ್ನು ಈ ವೇಳೆ ಸನ್ಮಾನಿಸಲಾಯಿತು.
ಗಾಯತ್ರಿ ನಾಗರಾಜ್ ಪ್ರಾರ್ಥಿಸಿದರು. ಮಂಜುನಾಥ್ ಸಂಜೀವ ಸ್ವಾಗತಿಸಿ, ನಾಗಾರ್ಜುನಸ್ವಾಮಿ ವಂದಿಸಿದರು.
ವಾಸ್ತವ್ಯ :
ಕಾರ್ಯಕ್ರಮ ಮುಗಿಸಿ ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಿಸಿ ಕೋಡೂರು ಸಮೀಪದ ಅಬ್ಬಿ ಗ್ರಾಮದ ಕಿರಣ್ರವರ ಮನೆಯಲ್ಲಿ ವಾಸ್ತವ್ಯ ಹೂಡಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





