RIPPONPETE ; ಇಲ್ಲಿನ ಬಿಎಸ್ಎನ್ಎಲ್ ಕಛೇರಿ ಸರಿಯಾದ ನಿರ್ವಹಣೆಯಿಲ್ಲದೇ ದೂರವಾಣಿ ಗ್ರಾಹಕರು ಪಡಬಾರದ ಕಷ್ಟ ಪಡುವಂತಾಗಿದೆ.
ಕೇಂದ್ರ ಸರ್ಕಾರದ ಖಾಸಗೀಕರಣದಿಂದಾಗಿ ಇಲ್ಲಿನ ಸುಸಜ್ಜಿತ ಕಟ್ಟಡ ಮತ್ತು ಕಟ್ಟಡದಲ್ಲಿನ ಬೆಲೆಬಾಳುವಂತಹ ಪೀಠೋಪಕರಣಗಳು ತುಕ್ಕು ಹಿಡಿಯವಂತಾಗಿ ಗ್ರಾಹಕರಿಗೆ ಸೇವಾ ಸೌಲಭ್ಯಗಳಿಲ್ಲದೆ ವಂಚಿತರನ್ನಾಗಿಸಿದೆ.
ಕಳೆದ ಒಂದು ತಿಂಗಳಿಂದ ನೆಟ್ ಇಲ್ಲದೆ ಸರ್ವರ್ ಸಮಸ್ಯೆ ಉಂಟಾಗಿದ್ದು ಸಾಕಷ್ಟು ಗ್ರಾಹಕರು ಹಿಡಿ ಶಾಪ ಹಾಕುವಂತಾಗಿದ್ದು ಪಡಿತರ ಬ್ಯಾಂಕ್ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಬಾಂಡ್ ಪೇಪರ್ ಹಾಗೂ ಗ್ರಾಮ ಒನ್ನಲ್ಲಿ ಸಹ ಅಗತ್ಯ ದಾಖಲೆ ಪತ್ರಕ್ಕಾಗಿ ನಿತ್ಯ ನಾಗರೀಕರು ಅಲೆಯುವಂತಾಗಿದೆ. ಈ ಬಗ್ಗೆ ಕಛೇರಿಯ ಅಧಿಕಾರಿಗಳಿಗೆ ದೂರು ಕೊಡಲು ಕಛೇರಿಯೇ ಬಂದ್ ಆಗಿ ನಾಲ್ಕೈದು ವರ್ಷಗಳಾಗಿ ಹೋಗಿದೆ. ಗ್ರಾಮೀಣ ರೈತ ನಾಗರೀಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ.
ಲೇಖನವನ್ನು ಮುಂದುವರಿಸಿ ಓದಿ

ಜನಪ್ರತಿನಿಧಿಗಳಲ್ಲಿ ಹೇಳಿಕೊಳ್ಳಲು ಹೋದರೆ ಕಿವಿಯ ಮೇಲೆ ಹಾಕಿಕೊಳ್ಳದೆ ಹಾಗೆಯೇ ಇಲ್ಲದ ಸಬೂಬು ಹೇಳಿಕೊಂಡು ಹೋಗುತ್ತಾರೆ. ಕಛೇರಿಯ ಬಳಿ ಪ್ರತಿಭಟನೆ ಮಾಡೋಣ ಅಂದರೆ ಮುಚ್ಚಿದ ಗೇಟ್ ಓಪನ್ ಮಾಡದಂತಾಗಿದೆ.
ಒಟ್ಟಾರೆಯಾಗಿ ಗ್ರಾಹಕರಿಗಿಲ್ಲದ ದೂರವಾಣಿ ಸೌಲಭ್ಯ ಇನ್ನಾರಿಗೆ ಬೇಕು ಎಂಬಂತಾಗಿದೆ.
ಒಂದು ಕಾಲದಲ್ಲಿ ಬಿ.ಎಸ್.ಎನ್.ಎಲ್ ನಿಸ್ತಂತು ಫೋನ್ಗೆ ಗ್ರಾಹಕರು ಮುಗಿಬೀಳುತ್ತಿದ್ದು ಮೊಬೈಲ್ ಫೋನ್ ಬಂದ ಮೇಲೆ ಇಲ್ಲದ ಸಮಸ್ಯೆಯಿಂದಾಗಿ ಗ್ರಾಹಕರು ಹೈರಾಣಾಗಿ ಹೋಗಿದ್ದಾರೆ.
ಇನ್ನಾದರೂ ಬಿ.ಎಸ್.ಎನ್.ಎಲ್. ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಹಕರ ಸಮಸ್ಯೆಗೆ ಪರಿಹಾರ ಕಲ್ಪಿಸುವರೇ ಕಾದು ನೋಡಬೇಕಾಗಿದೆ.

