ಹೊಸನಗರ ; ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಹೊಸನಗರದ ಸಾರ್ವಜನಿಕ ಆಸ್ಪತ್ರೆ ಮಳೆಗಾಲದಲ್ಲಿ ಸೋರುತ್ತಿದ್ದು ಯಂತ್ರೋಪಕರಣಗಳು ಹಾಳಾಗುತ್ತಿದೆ ಎಂದು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು ನಮ್ಮ ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಸರ್ಕಾರದ ಮತ್ತು ಸಚಿವರ ಗಮನಕ್ಕೆ ತಂದು ಸಾರ್ವಜನಿಕ ಆಸ್ಪತ್ರೆ ಬ್ಲಾಕ್ ಲೆವೆಲ್ ಪಬ್ಲಿಕ್ ಹೆಲ್ತ್ ಲ್ಯಾಬ್ ನಿರ್ಮಾಣ ಕಾಮಗಾರಿಗೆ 50 ಲಕ್ಷ ರೂ. ಹಾಗೂ ಆಸ್ಪತ್ರೆಯ ದುರಸ್ಥಿ ಹಾಗೂ ನವೀಕರಣ ಕಾಮಗಾರಿಗೆ 60 ಲಕ್ಷ ರೂಪಾಯಿಗಳನ್ನು ಒಟ್ಟು 1ಕೋಟಿ 10 ಲಕ್ಷ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದ್ದು ಈ ವರ್ಷದ ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಶಾಸಕರ ವಿಶೇಷ ಅಧಿಕಾರಿ ರಮೇಶ್ ತಿಳಿಸಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಗೆ ಇನ್ನೂ 1 ಕೋಟಿ 40 ಲಕ್ಷ ರೂಪಾಯಿ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆ ಹಣವೂ ಮಾರ್ಚ್ನಲ್ಲಿ ಕೇಂದ್ರದಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಆ ಹಣವೂ ಬಿಡುಗಡೆಯಾದರೆ ಒಟ್ಟು ಹೊಸನಗರದ ಸಾರ್ವಜನಿಕ ಆಸ್ಪತ್ರೆಗೆ ಎರಡು ಕೋಟಿಯಷ್ಟು ಹಣ ಸಿಗಲಿದ್ದು ಸಾರ್ವಜನಿಕ ಆಸ್ಪತ್ರೆಯ ಸುತ್ತ ಕಾಂಪೌಂಡ್ ನಿರ್ಮಾಣ ಇನ್ನೂ ಹೆಚ್ಚಿನ ಬಿಲ್ಡಿಂಗ್ಗಳನ್ನು ನಿರ್ಮಿಸಲಾಗುವುದು ಹೊಸನಗರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಯಾವ ತಾಲ್ಲೂಕಿಗಿಂತಲೂ ಕಮ್ಮಿಯಿಲ್ಲದಂತೆ ಮಾಡುವ ಗುರಿ ಹೊಂದಿದ್ದೇವೆ ಎಂದರು.

ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಈ ಸಂದರ್ಭದಲ್ಲಿ ಮಾತನಾಡಿ, ಹೊಸನಗರ ತಾಲ್ಲೂಕಿನಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬ್ಲಾಕ್ ಲೆವೆಲ್ ಪಬ್ಲಿಕ್ ಹೆಲ್ತ್ ಇರದಿರುವ ಕಾರಣ ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಹೆಲ್ತ್ ಲ್ಯಾಬ್ ತೆರೆಯುವುದರಿಂದ ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ. ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ, ನಗರ, ನಿಟ್ಟೂರು ಭಾಗದಿಂದ ಹಾಗೂ ಕೋಡೂರು, ಬಾಣಿಗ, ಬಟ್ಟೆಮಲ್ಲಪ್ಪದಿಂದ ಬರುವ ರೋಗಿಗಳಿಗೆ ಬಹಳ ಅನುಕೂಲಕರವಾಗಲಿದೆ. ಈ ಹಿಂದೆ ರಕ್ತದ ಸ್ಯಾಂಪಲ್ ತೆಗೆದು ಶಿವಮೊಗ್ಗಕ್ಕೆ ಕಳುಹಿಸಿ ನಂತರ ದಿನಗಟ್ಟಲೇ ರೋಗಿಗಳು ಕಾಯಬೇಕಾಗಿತ್ತು. ಮುಂದಿನ ದಿನದಲ್ಲಿ ಹೊಸನಗರದಲ್ಲಿಯೇ ಎಲ್ಲ ಕಾಯಿಲೆಗಳ ಬಗ್ಗೆ ಮಾಹಿತಿ ತೆಗೆದುಕೊಳ್ಳಬಹುದು ಇದರಿಂದ ರೋಗಿಗಳಿಗೆ ಖರ್ಚು ಇರುವುದಿಲ್ಲ ಹೊರ ತಾಲ್ಲೂಕಿಗೆ ಜಿಲ್ಲೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯವಿಲ್ಲವಾಗಿದ್ದು ಜೂನ್ ಅಂತ್ಯದ ಒಳಗೆ ಈ ಎಲ್ಲ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ನಮ್ಮ ಶಾಸಕರು ಹೊಂದಿದ್ದಾರೆ ಎಂದರು.
ಈ ಪತ್ರಿಕಾಘೋಷ್ಠಿಯಲ್ಲಿ ತಹಸೀಲ್ದಾರ್ ರಶ್ಮಿ ಹಾಲೇಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|| ಗುರುಮೂರ್ತಿ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ರಕ್ಷ ಸಮಿತಿಯ ಸದಸ್ಯರಾದ ದುಮ್ಮ ವಿನಯ್ಕುಮಾರ್, ಇಕ್ಬಾಲ್, ಜಯನಗರ ಗೋಪಿನಾಥ್ ಹಾಗೂ ಆಸ್ಪತ್ರೆಯ ಮಹಾಬಲೇಶ್ವರ ಜೋಯಿಸ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.