ರಿಪ್ಪನ್ಪೇಟೆ ; ಪ್ರತಿಯೋರ್ವರೂ ಧರ್ಮಾಚರಣೆಯಲ್ಲಿ ಪೂಜಾ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡು ಆಧ್ಯಾತ್ಮದ ಒಲವು ತೋರಬೇಕು. ಹಾಗೆಯೇ ಯಥೋಚಿತವಾಗಿ ಸಂಕಷ್ಟದಲ್ಲಿರುವವರನ್ನು ಸಂತೈಸುವುದು, ಪರೋಪಕಾರ ಮಾಡುವುದೂ ಧರ್ಮಾಚರಣೆಯಲ್ಲಿ ಮಹತ್ವವನ್ನು ಪಡೆದಿದೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಪರ್ಯೂಷಣ ಪರ್ವದ ಎಂಟನೇಯ ದಿನದಂದು ‘ಉತ್ತಮ ತ್ಯಾಗ’ ಧರ್ಮದ ಕುರಿತು ಪ್ರವಚನದಲ್ಲಿ ವಿವರಿಸಿದರು.
ತ್ಯಾಗ ಧರ್ಮದಿಂದ ಬಾಳಿನಲ್ಲಿ ತೃಪ್ತಿ ದೊರಕುತ್ತದೆ. ಅಶಕ್ತರಿಗೆ ಸಹಾಯ ಮಾಡುವ, ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಧನ ನೀಡುವ, ದುರ್ಬಲರ ಏಳಿಗೆಗೆ ಸಹಕರಿಸುವ ತ್ಯಾಗ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದರಿಂದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು ಎಂದು ವ್ಯಾಖ್ಯಾನಿಸಿದರು.
ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ, ಶ್ರೀ ಮಹಾವೀರ ಸ್ವಾಮಿ ಹಾಗೂ ಕ್ಷೇತ್ರದ ಎಲ್ಲ ಜಿನಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಮಾಜದ, ಊರ ಪರವೂರ ಭಕ್ತರು ದಶಲಕ್ಷಣ ಪರ್ವದಲ್ಲಿ ಭಾಗಿಯಾದರು. ಶ್ರೀಗಳವರು ಶ್ರೀಮಂತ್ರಾಕ್ಷತೆ ನೀಡಿ, ‘ತ್ಯಾಗ ಧರ್ಮ’ ಪರಿಪಾಲಿಸಲು ಹರಸಿದರು.

