ಶಿವಮೊಗ್ಗ: ಮುನ್ಸೂಚನೆ ನೀಡದೆ ವಾಹನ ಜಪ್ತಿ ಮಾಡಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಟಿವಿಎಸ್ ಕ್ರೆಡಿಟ್ ಸರ್ವಿಸಸ್ ಸಂಸ್ಥೆಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ಆದೇಶ ನೀಡಿದೆ.
ದೂರುದಾರರಿಗೆ ವಾಹನವನ್ನು ಹಿಂತಿರುಗಿಸುವ ಜೊತೆಗೆ, ಮಾನಸಿಕ ಹಿಂಸೆ ಮತ್ತು ವ್ಯಾಜ್ಯ ವೆಚ್ಚ ಸೇರಿ ಒಟ್ಟು ₹1.10 ಲಕ್ಷ ಪರಿಹಾರ ಪಾವತಿಸುವಂತೆ ಆಯೋಗ ಸೂಚಿಸಿದೆ.
ಶಿವಮೊಗ್ಗದ ತುಂಗಾನಗರ ನಿವಾಸಿ ಶಾಬಾಜ್ ಎಸ್. ಅವರು ಜೀವನೋಪಾಯಕ್ಕಾಗಿ ₹15,10,147 ಸಾಲ ಪಡೆದು ಐಷರ್ ಪ್ರೊ 30009 ಗೂಡ್ಸ್ ವಾಹನ ಖರೀದಿಸಿದ್ದರು. ತಿಂಗಳಿಗೆ ₹44,361 ಇಎಂಐ ನಿಗದಿಯಾಗಿದ್ದು, ಅವರು 5 ಕಂತುಗಳನ್ನು ಪಾವತಿಸಿ, 4 ಕಂತುಗಳನ್ನು ಬಾಕಿ ಉಳಿಸಿಕೊಂಡಿದ್ದರು.
2024ರ ಡಿಸೆಂಬರ್ 31ರಂದು ವಾಹನವು ಕೆಲಸದ ನಿಮಿತ್ತ ಹಾಸನಕ್ಕೆ ತೆರಳಿದ್ದ ವೇಳೆ, ಯಾವುದೇ ಪೂರ್ವ ಮಾಹಿತಿ ಅಥವಾ ನೋಟಿಸ್ ನೀಡದೆ ಟಿವಿಎಸ್ ಕ್ರೆಡಿಟ್ ಸಂಸ್ಥೆ ವಾಹನವನ್ನು ಜಪ್ತಿ ಮಾಡಿಕೊಂಡಿತ್ತು ಎಂದು ದೂರುದಾರರು ಆರೋಪಿಸಿದ್ದರು.
ನಂತರ ಆರ್ಬಿಐ ಮಾರ್ಗಸೂಚಿಗಳನ್ನು ಪಾಲಿಸದೆ ವಾಹನವನ್ನು ಹರಾಜು ಮೂಲಕ ಮಾರಾಟ ಮಾಡಲಾಗಿದೆ ಎಂದು 2025ರ ಫೆಬ್ರವರಿ 2ರಂದು ಸಂಸ್ಥೆ ನೋಟಿಸ್ ನೀಡಿತ್ತು. ಜೊತೆಗೆ ಬಾಕಿ ವ್ಯತ್ಯಾಸ ಮೊತ್ತವಾಗಿ ₹4,84,204 ಪಾವತಿಸುವಂತೆ ಶಾಬಾಜ್ ಅವರಿಗೆ ಸೂಚಿಸಿತ್ತು.
ಇದನ್ನು ಪ್ರಶ್ನಿಸಿ ಶಾಬಾಜ್ ಅವರು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಆಯೋಗವು, ಆರ್ಬಿಐ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಹೈಕೋರ್ಟ್ ತೀರ್ಪುಗಳನ್ನು ಪರಿಗಣಿಸಿ, ಹಣಕಾಸು ಸಂಸ್ಥೆಯ ನಡೆ ಸೇವಾ ನ್ಯೂನ್ಯತೆ ಮತ್ತು ಅನುಚಿತ ವ್ಯವಹಾರ ಪದ್ಧತಿ ಎಂದು ತೀರ್ಮಾನಿಸಿದೆ.
ಆದೇಶ ನೀಡಿದ ದಿನಾಂಕದಿಂದ 45 ದಿನಗಳ ಒಳಗೆ ಐಷರ್ ವಾಹನವನ್ನು ದೂರುದಾರರ ವಶಕ್ಕೆ ನೀಡಬೇಕು ಎಂದು ಆಯೋಗ ಸೂಚಿಸಿದೆ. ನಿಗದಿತ ಅವಧಿಯಲ್ಲಿ ವಾಹನ ಹಿಂತಿರುಗಿಸಲು ವಿಫಲವಾದರೆ, ವಾಹನ ಹಸ್ತಾಂತರಿಸುವವರೆಗೆ ದಿನಕ್ಕೆ ₹2,000 ದಂಡ ಪಾವತಿಸಬೇಕು ಎಂದು ಆದೇಶಿಸಲಾಗಿದೆ.
ಇದೇ ವೇಳೆ ಮಾನಸಿಕ ಹಿಂಸೆಗೆ ₹1,00,000 ಮತ್ತು ವ್ಯಾಜ್ಯ ವೆಚ್ಚವಾಗಿ ₹10,000 ಸೇರಿ ಒಟ್ಟು ₹1,10,000 ಪರಿಹಾರವನ್ನು 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ ವಾರ್ಷಿಕ ಶೇ.10ರ ಬಡ್ಡಿ ಸಹಿತ ಮೊತ್ತ ಪಾವತಿಸಬೇಕಾಗುತ್ತದೆ.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.

