ಶಿವಮೊಗ್ಗ ಸುದ್ದಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ; 61 ವಾರಗಳಿಗೆ ಸಾಕಾಗುವಷ್ಟು ಸಂಗ್ರಹ ಲಭ್ಯ — ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ

ಶಿವಮೊಗ್ಗ, ಆಗಸ್ಟ್ 4: ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಮೇವಿನ ಕೊರತೆ ಇಲ್ಲ. ಜಿಲ್ಲೆಯಲ್ಲಿ ಒಟ್ಟು 12.76 ಲಕ್ಷ ಟನ್ ಮೇವು ಲಭ್ಯವಿದ್ದು, ಮುಂದಿನ 61 ವಾರಗಳವರೆಗೆ ಜಾನುವಾರುಗಳ ಅಗತ್ಯ ಪೂರೈಸಲು ಸಾಕಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಮೇವು ಅಭಿವೃದ್ಧಿ ಕಾರ್ಯಪಡೆ ಸಮಿತಿ ಹಾಗೂ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 4.84 ಲಕ್ಷ ದೊಡ್ಡ ಜಾನುವಾರುಗಳು, ಅಂದರೆ ದನ ಮತ್ತು ಎಮ್ಮೆಗಳಿವೆ. ಇದರ ಜೊತೆಗೆ 86 ಸಾವಿರ ಸಣ್ಣ ಜಾನುವಾರುಗಳು, ಅಂದರೆ ಕುರಿ ಮತ್ತು ಮೇಕೆಗಳಿವೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಯಾವ ತಾಲೂಕಿನಲ್ಲಿ ಎಷ್ಟು ವಾರಗಳಿಗೆ ಮೇವು ಲಭ್ಯ?

ಜಿಲ್ಲೆಯಲ್ಲಿ ತಾಲೂಕುವಾರು ಲಭ್ಯವಿರುವ ಮೇವು ಸಂಗ್ರಹದ ವಿವರ ಹೀಗಿದೆ:

ತಾಲೂಕುಲಭ್ಯವಿರುವ ಮೇವು
ಸಾಗರ75 ವಾರಗಳು
ಭದ್ರಾವತಿ65 ವಾರಗಳು
ಹೊಸನಗರ61 ವಾರಗಳು
ತೀರ್ಥಹಳ್ಳಿ60 ವಾರಗಳು
ಸೊರಬ59 ವಾರಗಳು
ಶಿವಮೊಗ್ಗ56 ವಾರಗಳು
ಶಿಕಾರಿಪುರ48 ವಾರಗಳು

ಮೇವಿನ ಸಂಗ್ರಹ ಸಮರ್ಪಕವಾಗಿದ್ದರೂ, ಪರ್ಯಾಯ ಮೇವಿನ ಬಳಕೆಯ ಕುರಿತು ರೈತರಲ್ಲಿ ನಿರಂತರವಾಗಿ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

50 ಸಾವಿರ ಮೇವಿನ ಮಿನಿಕಿಟ್‌ಗಳಿಗೆ ಪ್ರಸ್ತಾವನೆ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ಮೇವು ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲು 50 ಸಾವಿರ ಮೇವಿನ ಮಿನಿಕಿಟ್‌ಗಳನ್ನು ಸರಬರಾಜು ಮಾಡುವಂತೆ ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಈ ಮಿನಿಕಿಟ್‌ಗಳ ಮೂಲಕ ಸುಮಾರು 250 ಟನ್ ಮೇವು ಉತ್ಪಾದನೆಗೆ ನೆರವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸರ್ಕಾರಿ ಭೂಮಿಯಲ್ಲಿ ಸಮುದಾಯ ಮೇವು ಬೆಳೆ

‘ವಿಬಿಜಿ–ಜಿ ರಾಮ್ ಜಿ’ ಯೋಜನೆಯಡಿ ಗ್ರಾಮ ಪಂಚಾಯಿತಿಗಳ ಮೂಲಕ ಕನಿಷ್ಠ ಐದು ಎಕರೆ ಸರ್ಕಾರಿ ಭೂಮಿಯಲ್ಲಿ ಸಮುದಾಯ ಮೇವು ಬೆಳೆಸಲು ಅವಕಾಶವಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಬಾಳೆ ಎಲೆ, ಬಾಳೆ ದಿಂಡು, ಹೊಂಬಾಳೆ, ಅಡಿಕೆ ಹಾಳೆ, ಕಬ್ಬಿನ ಸಿಪ್ಪೆ ಹಾಗೂ ಮೆಕ್ಕೆಜೋಳದ ರವದಿ ಮತ್ತು ಸಿಪ್ಪೆಗಳನ್ನು ಪರ್ಯಾಯ ಮೇವಾಗಿ ಬಳಸುವ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ.

ರಸಮೇವು, ಒಣ ಮತ್ತು ಹಸಿರು ಮೇವು, ಜಲಮೇವು ತಯಾರಿಕೆ ಹಾಗೂ ಸುಬಾಬುಲ್, ಗೊಬ್ಬರ ಗಿಡ, ಹಾಲಿವಾಣ, ನುಗ್ಗೆ ಮತ್ತು ಅಗಸೆ ಎಲೆಗಳ ಬಳಕೆಯ ಕುರಿತು ಸಹ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸಂಚಾರಿ ಪಶುಚಿಕಿತ್ಸಾ ಘಟಕದಿಂದ ಗುರಿ ಮೀರಿದ ಸೇವೆ

ಜೂನ್ ತಿಂಗಳಲ್ಲಿ ಸಂಚಾರಿ ಪಶುಚಿಕಿತ್ಸಾ ಘಟಕಗಳ ಮೂಲಕ ಉಚಿತ ತುರ್ತು ಸೇವೆ ನೀಡುವಲ್ಲಿ ಶಿವಮೊಗ್ಗ ಜಿಲ್ಲೆ ಗುರಿ ಮೀರಿದ ಸಾಧನೆ ಮಾಡಿದೆ.

ಜಿಲ್ಲೆಗೆ 630 ಪ್ರಕರಣಗಳಿಗೆ ಚಿಕಿತ್ಸೆ ನೀಡುವ ಗುರಿ ನಿಗದಿಯಾಗಿದ್ದರೂ, ಸಂಚಾರಿ ಘಟಕಗಳ ಮೂಲಕ 966 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಈ ಘಟಕಗಳ ಸುಗಮ ಕಾರ್ಯನಿರ್ವಹಣೆಗೆ ಅಗತ್ಯವಿರುವ ಔಷಧಿ ಮತ್ತು ರಾಸಾಯನಿಕಗಳನ್ನು ತಕ್ಷಣ ಪೂರೈಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ನೋಂದಣಿಯಾಗದ ಪೆಟ್ ಶಾಪ್‌ಗಳಿಗೆ ನೋಟಿಸ್

‘ಪೆಟ್ ಶಾಪ್ ನಿಯಮಗಳು–2018’ ಹಾಗೂ ‘ಶ್ವಾನಗಳ ತಳಿ ಸಂವರ್ಧನೆ ನಿಯಮಗಳು–2017’ರ ಅಡಿಯಲ್ಲಿ ಜಿಲ್ಲೆಯಲ್ಲಿ ತಲಾ 12 ಪೆಟ್ ಶಾಪ್ ಮತ್ತು ಶ್ವಾನ ತಳಿ ಸಂವರ್ಧನಾ ಕೇಂದ್ರಗಳು ನೋಂದಣಿಯಾಗಿವೆ.

ಇನ್ನೂ ನೋಂದಣಿ ಮಾಡಿಸದ ಮಾಲೀಕರಿಗೆ ಸ್ಥಳೀಯ ಪಶುವೈದ್ಯ ಸಂಸ್ಥೆಗಳ ಮೂಲಕ ಎಚ್ಚರಿಕೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬೀದಿ ನಾಯಿಗಳಿಗೆ ಲಸಿಕೆ ಮತ್ತು ಸಂತಾನಹರಣ

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ನಿಯಮಿತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಶಾಲೆ, ಕಾಲೇಜು, ಕಚೇರಿ ಮತ್ತು ಬಸ್ ನಿಲ್ದಾಣಗಳ ಆವರಣದಲ್ಲಿರುವ ನಾಯಿಗಳನ್ನು ಮಾತ್ರ ಸ್ಥಳಾಂತರಿಸಲು ಅವಕಾಶವಿದೆ. ಸ್ಥಳಾಂತರಿಸಲಾದ ನಾಯಿಗಳಿಗೆ ಆಶ್ರಯ, ಆಹಾರ ಮತ್ತು ಅಗತ್ಯ ಆರೈಕೆ ಒದಗಿಸಬೇಕು ಎಂದು ಹೇಳಿದರು.

ಬೀದಿ ನಾಯಿಗಳನ್ನು ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಹಿಡಿಯುವ ಸಿಬ್ಬಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಖಾಸಗಿ ಗೋಶಾಲೆಗಳಿಗೆ ನೆರವು

ಪಶುಪಾಲನಾ ಇಲಾಖೆಯಿಂದ ಖಾಸಗಿ ಗೋಶಾಲೆಗಳ ನಿರ್ವಹಣೆಗೆ ಬೆಂಬಲ ನೀಡಲಾಗುತ್ತಿದೆ. ಸಹಾಯಾನುದಾನ ಕೋರಿ ಐದು ಪ್ರಸ್ತಾವನೆಗಳು ಬಂದಿದ್ದು, ಅವುಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ರೇಖಾ, ಪಾಲಿಕ್ಲಿನಿಕ್ ಉಪ ನಿರ್ದೇಶಕ ಡಾ. ಸುದರ್ಶನ್ ಹಾಗೂ ಪ್ರಾಣಿ ದಯಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Comment