ಯುವ ಸಮೂಹ ದೇಶಕ್ಕೆ ಮಾದರಿಯಾಗಬೇಕು ; ಶಾಸಕ ಬೇಳೂರು ಗೋಪಾಲಕೃಷ್ಣ
ರಿಪ್ಪನ್ಪೇಟೆ: ಯುವ ಸಮೂಹ ಸಮಾಜಕ್ಕೆ ಮಾದರಿಯಾಗಬೇಕು. ಕೇವಲ ಅಂಕ ಗಳಿಸಲು ಮಾತ್ರ ಶಿಕ್ಷಣ ಸೀಮಿತವಾಗದೆ ಬದುಕಿಗೆ ಉತ್ತಮ ಗುಣಗಳನ್ನು ಬೆಳೆಸುವಂತಾಗಬೇಕು. ಶಾಶ್ವತವಾಗಿ ಹೆಸರು ಉಳಿಯುವಂತೆ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು. ದೇಶದ ಆರ್ಥಿಕತೆಗೆ ಮೌಲ್ಯಾಧಾರಿತ ಶಿಕ್ಷಣವನ್ನು ಕೊಡಿಸುವುದರಿಂದ ವಿದ್ಯಾರ್ಥಿಗಳ ಪಾತ್ರ ಅತಿಮುಖ್ಯ ಎಂದು ಸಾಗರ-ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ರಿಪ್ಪನ್ಪೇಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜ್ನಲ್ಲಿ ಆಯೋಜಿಸಲಾದ 2023-24 ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಎನ್.ಎಸ್.ಎಸ್.ಯುವ ರೆಡ್ ಕ್ರಾಸ್, ರೋರ್ಸ್-ರೇರ್ಸ್ ಚಟುವಟಿಕೆಗಳ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂದೆ ತಾಯಿಯರ ಆಶೋತ್ತರಗಳನ್ನು ಪೂರೈಸುವ ಶಕ್ತಿ ವಿದ್ಯಾರ್ಥಿ ಯುವ ಸಮೂಹದಾಗಿದೆ. ಎಂತಹ ಸಂಕಷ್ಟ ಎದುರಾದರೂ ಕೂಡಾ ನಮ್ಮ ವಿದ್ಯಾರ್ಥಿಗಳು ಅರ್ಧಕ್ಕೆ ವ್ಯಾಸಂಗವನ್ನು ಬಿಡದೆ ಮುಂದುವರಿಸಿ ನಿಮ್ಮಗಳ ಜೊತೆ ಬೆಂಬಲಕ್ಕೆ ನಾನು ಇದ್ದೇನೆ ಎಂಬ ಭರವಸೆಯನ್ನು ನೀಡಿದರು.
ಶಾಲಾ ಕಟ್ಟಡ ಹಳೆಯದಾಗಿರಬಹುದು ಶಿಕ್ಷಣ ಕೊಡುವ ಶಿಕ್ಷಕರು ಹೊಸ ಆವಿಷ್ಕಾರಗಳ ಮೂಲಕ ಭೋದನೆ ಮಾಡುವುದರಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಪ್ರಗತಿ ಹೊಂದಲು ಸಾಧ್ಯವೆಂದ ಅವರು, ಕಾಲೇಜ್ಗೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಅನುದಾನವನ್ನು ಕೊಡಿಸುವುದಾಗಿ ವಿವರಿಸಿದರು.
ಸಮಾರಂಭದ ಆಧ್ಯಕ್ಷತೆಯನ್ನು ಕಾಲೇಜ್ ಪ್ರಾಚಾರ್ಯ ಟಿ.ಚಂದ್ರಶೇಖರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಕಾಲೇಜ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹಾಲಸ್ವಾಮಿಗೌಡ ಬೆಳಕೋಡು, ಸಿಡಿಸಿ ಸಮಿತಿಯ ಆರ್.ಹೆಚ್.ಶ್ರೀನಿವಾಸ್ ಆಚಾರ್, ಮಂಜುನಾಥ ಮಳವಳ್ಳಿ, ರಮೇಶ್, ಮಂಜುನಾಥ ಕಾಮತ್, ಪಿಯೂಸ್ ರೋಡ್ರಿಗಸ್ ಉಲ್ಲಾಸ್, ವಿಜೇಂದ್ರ, ಪುಟ್ಟಸ್ವಾಮಿ, ಅನುಪಮ, ರಾಘು, ಅನುಷ, ಅಬ್ದುಲ್ಭಾಷಾ, ಇನ್ನಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಸೆಪ್ಟಂಬರ್ ಮತ್ತು ಅಕ್ಟೋಬರ್ 2023 ರಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಬಿಎ ವಿಭಾಗದಲ್ಲಿ ಶೇ. 93.71 ಅಂಕ ಗಳಿಸಿ ನಾಲ್ಕನೇ ರ್ಯಾಂಕ್ ವಿದ್ಯಾರ್ಥಿನಿಯಾದ ಕುಮಾರಿ ಸಿಂಧು ಕೆ. ಸೇರಿದಂತೆ ಇತರ ವಿಭಾಗದ ಅತಿಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಸನ್ಮಾನಿಸಿ ಗೌರವಿಸಿದರು.
ಶಿವಮೊಗ್ಗದ ನಿವೃತ್ತ ಉಪನ್ಯಾಸಕ ಕೆ.ಸಿ.ಚಂದ್ರಪ್ಪ ವಿಶೇಷ ಉಪನ್ಯಾಸ ನೀಡಿದರು.
ಭೂಮಿಕಾ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಡಾ.ರತ್ನಾಕರ ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಕುಳಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.