ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಮನವಿ
ಶಿವಮೊಗ್ಗ: ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಇಂದು ಕರ್ನಾಟಕ ಕನ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಟ್ಟಡ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ನಮ್ಮ ಬೇಡಿಕೆಗಳು ಇನ್ನೂ ಈಡೇರಿಲ್ಲ. ಆದ್ದರಿಂದ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಕಟ್ಟಡ ಕಾರ್ಮಿಕರಲ್ಲದವರೂ ಕೂಡ ನೋಂದಣಿ ಮಾಡಿಸುತ್ತಿದ್ದಾರೆ. ಹೀಗೆ ನೋಂದಣಿ ಮಾಡಿಕೊಡುವ ಸೈಬರ್ ಸೆಂಟರ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕಾರ್ಮಿಕರಿಗೆ ನೀಡುವ ಕಿಟ್ ಗಳು ನಿಜವಾದ ಕಾರ್ಮಿಕರಿಗೆ ಸಿಗುವುದಿಲ್ಲ. ಆದ್ದರಿಂದ ಕಿಟ್ ಗಳನ್ನೇ ವಿತರಿಸಬಾರದು ಎಂದು ಮನವಿದಾರರು ತಿಳಿಸಿದರು.
ಮದುವೆಗೆ 60 ಸಾವಿರ ರೂ. ಧನಸಹಾಯ ಈಗ ನೀಡುತ್ತಿದ್ದು, ಬೆಲೆ ಏರಿಕೆಯಾಗಿರುವುದರಿಂದ ಅದನ್ನು 2 ಲಕ್ಷಕ್ಕೆ ಹೆಚ್ಚಿಸಬೇಕು. ಕಾರ್ಮಿಕ ಕುಟುಂಬದ ಮುಖ್ಯಸ್ಥ ಸಹಜವಾಗಿ ಮರಣವೊಂದಿದರೆ 75 ಸಾವಿರ ರೂ. ನೀಡುತ್ತಿದ್ದು, ಆ ಪರಿಹಾರವನ್ನು ಎರಡು ಲಕ್ಷಕ್ಕೆ ಹೆಚ್ಚಳ ಮಾಡಬೇಕು. ಪಿಂಚಣಿ ಹಣವನ್ನು 3 ಸಾವಿರದಿಂದ 5 ಸಾವಿರ ರೂ.ಗೆ ಹೆಚ್ಚಿಸಬೇಕು. ಇಎಸ್ಐ ಸೌಲಭ್ಯ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಾಸುದೇವ, ಟಿ. ಮೋಹನ್, ಚೆಲುವರಾಜ್, ಭಾಸ್ಕರ್, ಎಂ. ಜಯಪ್ಪ ಮೊದಲಾದವರಿದ್ದರು.