ಗಣಪತಿ ಮೆರವಣಿಗೆಯನ್ನು ರಾಜಕೀಯಗೊಳಿಸುವ ಪ್ರಯತ್ನ ಮಾಡುವ ಮೂಲಕ BYR ಘನತೆ ಕಳೆದುಕೊಂಡಿದ್ದಾರೆ ; ಎನ್. ರಮೇಶ್ ಆರೋಪ

0 212

ಶಿವಮೊಗ್ಗ: ಹಿಂದೂ ಮಹಾಮಂಡಳಿ ಗಣಪತಿ ಉತ್ಸವ ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಆದರೆ ಈ ಬಾರಿ ಮೆರವಣಿಗೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಮೆರವಣಿಗೆಯನ್ನು ರಾಜಕೀಯಗೊಳಿಸುವ ಪ್ರಯತ್ನ ಮಾಡುವ ಮೂಲಕ ಘನತೆ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್. ರಮೇಶ್ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನಡೆದಿದೆ. ಎಲ್ಲಾ ಪಕ್ಷದ, ಎಲ್ಲಾ ಜನಾಂಗದ ಪ್ರಮುಖರು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಆದರೆ ಸಂಸದ ಬಿ.ವೈ. ರಾಘವೇಂದ್ರ ಅವರು, ಮಾತ್ರ ಚುನಾವಣೆಯ ಪ್ರಚಾರಕ್ಕಾಗಿ ಈ ಮೆರವಣಿಗೆಯನ್ನು ಬಳಸಿಕೊಂಡು ರಾಜಕೀಯ ಭಾಷಣ ಮಾಡಿದ್ದಾರೆ ಎಂದರು.


ಶೀನಪ್ಪಶೆಟ್ಟಿ ವೃತ್ತದಲ್ಲಿ ಮೆರವಣಿಗೆಯಲ್ಲಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತಾನಾಡಿದ ಬಿ.ವೈ. ರಾಘವೇಂದ್ರ ಅವರು ಈ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈಭವದಿಂದ ಕೂಡಿದ ಮೆರವಣಿಗೆಯನ್ನು ರಾಜಕೀಕರಣಗೊಳಿಸುವ ಅಕ್ಷಮ್ಯ ಕೃತ್ಯವನ್ನು ನಡೆಸಿದ್ದು ಅತ್ಯಂತ ಖಂಡನೀಯವಾದುದು. ಸದ್ಯದಲ್ಲೆ ಲೋಕಸಭಾ ಚುನಾವಣೆಯಿರುವುದರಿಂದ ಮತ ಕ್ರೋಡೀಕರಣ ದುರುದ್ದೇಶಕ್ಕೆ ಗಣಪತಿ ಮೆರವಣಿಗೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದ ಅವರರು, ಸಂಸದರು ಹಿಂದೂ ಮಹಾಮಂಡಳಿಯ ಮತ್ತು ಹಿಂದೂಗಳ ಕ್ಷಮೆ ಕೇಳಬೇಕು ಎಂದರು.

ಹಿಂದೂ ಮಹಾಮಂಡಳಿ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಅದ್ದೂರಿಯಾಗಿ ಮತ್ತು ಶಾಂತಿಯುತ ವಾಗಿ ನಡೆದಿದೆ. ಇದಕ್ಕೆ ಗಣಪತಿ ಸಮಿತಿ ಮತ್ತು ಜಿಲ್ಲಾಡಳಿತದ ಶ್ರಮ ಸಹಕಾರ ಕಾರಣ. ಇದಕ್ಕಾಗಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಆಡಳಿತ, ಹಿಂದೂ ಮಹಾಮಂಡಳಿಯವರಿಗೂ ಧನ್ಯವಾದಗಳು ಎಂದರು.

ಶಾಂತಿಯುತ ಗಣಪತಿ ಮೆರವಣಿಗೆಯ ಯಶಸ್ಸು ಸಮಸ್ತ ಆಸ್ತಿಕ ಸದ್ಭಕ್ತರಿಗೆ ಹಾಗೂ ವಿಶೇಷವಾಗಿ ಅಂದು ನಡೆಯಬೇಕಿದ್ದ ಈದ್ ಮಿಲಾದ್ ಹಬ್ವದ ಮುಸ್ಲಿಂ ಸಮುದಾಯದ ಮೆರವಣಿಗೆಯನ್ನು ಮುಂದೂಡಿ ಸಹಕರಿಸಿದ ಸಮಸ್ತ ಮುಸ್ಲಿಂ ಬಾಂಧವರಿಗೂ ಸಲ್ಲಬೇಕು ಎಂದರು.

ನಿನ್ನೆ ರಾತ್ರಿ ರಾಗಿಗುಡ್ಡ- ಶಾಂತಿನಗರ ಬಡಾವಣೆಯಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಸೌಹಾರ್ದತೆ ಕದಡುವ ಅಹಿತಕರ ಘಟನೆಗಳು ನಡೆದಿರುವುದು ಅತ್ಯಂತ ಖಂಡನೀಯ.
ಶಾಂತಿ – ಸೌಹಾರ್ದತೆ ಕದಡುವ ಉದ್ದೇಶ ಹೊಂದಿರುವವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ. ಅವರು ಕಿಡಿಗೇಡಿಗಳೆ ಆಗಿರುತ್ತಾರೆ. ಇಂತಹವರನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಬದ್ದವಾಗಿದೆ. ನೆನ್ನೆಯ ಘಟನಾವಳಿಗಳ ಬಗ್ಗೆ ಪೊಲೀಸರು ತನಿಖೆ ನಡೆಸಿ ಗಲಭೆಗೆ ಕಾರಣರಾದ ವ್ಯಕ್ತಿ ಗಳು,ಶಕ್ತಿಗಳು ಯಾರೇ ಆಗಿರಲಿ ಅಂತಹವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಈಗಾಗಲೆ ಮುಖ್ಯಮಂತ್ರಿಗಳು, ಗೃಹಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಜಿಲ್ಲಾ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶಾಂತಿಭಂಗ ಮಾಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ
ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಶಾಂತಿ – ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು.
– ಎನ್.ರಮೇಶ್, ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಶಿವಮೊಗ್ಗ

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಶಿಕಾರಿಪುರ ನಾಗರಾಜಪ್ಪ ಗೌಡ, ಆಸೀಫ್, ಹನುಮಂತು, ಉಮೇಶ್, ಚಂದ್ರಶೇಖರ್ ಇದ್ದರು.

Leave A Reply

Your email address will not be published.

error: Content is protected !!