Shivamogga | ಪೊಲೀಸರು ಗಾಂಧಿಬಜಾರ್‌ನಲ್ಲಿ ಬಲವಂತದ ಬಂದ್ ಮಾಡಿಸಬಾರದು ; ಎನ್. ಗೋಪಿನಾಥ್

0 77

ಶಿವಮೊಗ್ಗ: ರಾಗಿಗುಡ್ಡದಲ್ಲಿ ನಡೆದ ಘಟನೆಯಿಂದ ಇಡೀ ಶಿವಮೊಗ್ಗ ನಗರದಲ್ಲಿ ಸೆಕ್ಷನ್ ಜಾರಿ ಮಾಡಲಾಗಿದ್ದು, ಪೊಲೀಸರು ಗಾಂಧಿಬಜಾರ್‌ನಲ್ಲಿ ಬಲವಂತದ ಬಂದ್ ಮಾಡಿಸಬಾರದು ಎಂದು ಜಿಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಹೇಳಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬ ಮತ್ತು ಈದ್‌ಮಿಲಾದ್ ಅಂಗವಾಗಿ ಕಳೆದ ನಾಲ್ಕು ದಿನಗಳಿಂದ ಗಾಂಧಿಬಜಾರಿನ ಎಲ್ಲಾ ವರ್ತಕರು ವ್ಯವಹಾರ ಸ್ಥಗಿತಗೊಳಿಸಿ ಸಹಕರಿಸಿದ್ದಾರೆ. ಆದರೆ ನಗರದಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ರಾಗಿಗುಡ್ಡದಲ್ಲಿ ಈದ್‌ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರೂ ಸಹ ಆ ಘಟನೆ ಕೇವಲ ರಾಗಿಗುಡ್ಡಕ್ಕೆ ಸೀಮಿತವಾಗಿದ್ದರೂ ಕೆಲವು ಮಾಧ್ಯಮಗಳಲ್ಲಿ ಅತಿರಂಚಿತವಾಗಿ ತೋರಿಸುತ್ತಿರುವುದರಿಂದ ಶಿವಮೊಗ್ಗಕ್ಕೆ ಬರುವ ಗ್ರಾಹಕರು ಮತ್ತು ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ ಮತ್ತು ಈ ರೀತಿಯ ಸುದ್ದಿಗಳಿಂದ ಶಿವಮೊಗ್ಗದ ಶಾಂತಿಗೆ ಇನ್ನಷ್ಟು ಹಾನಿ ಆಗಲಿದೆ. ಜಿಲ್ಲಾ ರಕ್ಷಣಾಧಿಕಾರಿಗಳು ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಮಾಧ್ಯಮಗಳು ವ್ಯಾಪಾರಿಗಳು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಸಾರ್ವಜನಿಕರ ಆತಂಕ ದೂರ ಮಾಡುವಲ್ಲಿ ಸಹಕರಿಸಬೇಕು ಎಂದು ವಿನಂತಿಸಿದರು.


144 ಸೆಕ್ಷನ್ ಅನ್ನು ಕೇವಲ ರಾಗಿಗುಡ್ಡಕ್ಕೆ ಮಾತ್ರ ಸೀಮಿತ ಮಾಡಬೇಕೆಂದು ಈಗಾಗಲೇ ನಾವು ಜಿಲ್ಲಾ ರಕ್ಷಣಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ವಿನಂತಿಸಿದ್ದೇವೆ. ಶಿವಮೊಗ್ಗಕ್ಕೆ ಕೆಟ್ಟ ಹೆಸರು ಬರದಂತೆ ಎಲ್ಲರೂ ನೋಡಿಕೊಳ್ಳಬೇಕು. ವಾಣಿಜ್ಯೋದ್ಯಮ ಬೆಳೆಸಲು ಅವಕಾಶ ಕೊಡಿ. ಶಿವಮೊಗ್ಗ ಅಭಿವೃದ್ಧಿಗೆ ಮಾರಕವಾಗದಂತೆ ಮಾಧ್ಯಮಗಳು ಸಂಯಮವಹಿಸಬೇಕೆಂದು ಅವರು ವಿನಂತಿಸಿದರು.


ಈ ಸಂದರ್ಭದಲ್ಲಿ ಕೆಲವು ಮಾಧ್ಯಮದವರು ನಾವು ವಾಸ್ತವಾಂಶ ಮಾತ್ರ ತೋರಿಸಿದ್ದೇವೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಉದ್ಯಮಿಗಳಿಗೆ ಭದ್ರತೆ ಒದಗಿಸುವುದು ಜಿಲ್ಲಾಡಳಿತದ ಕರ್ತವ್ಯ. ಸೆಕ್ಷನ್ ಮತ್ತು ಕರ್ಫ್ಯೂ ಇದಕ್ಕೆ ವ್ಯತ್ಯಾಸವಿದ್ದು, ಜಿಲ್ಲಾಡಳಿತ ವ್ಯವಹಾರಗಳಿಗೆ ಅವಕಾಶ ನೀಡಲಿ. ಮಾಧ್ಯಮದವರ ಮೇಲೆ ಗೂಬೆ ಕೂರಿಸುವುದು ಬೇಡ ಎಂದು ಕೆಲವು ಮಾಧ್ಯಮದವರು ಕೂಡ ಸಲಹೆ ನೀಡಿದ್ದಾರೆ.


ಈ ಸಂದರ್ಭದಲ್ಲಿ ನಗರದ ಶಾಂತಿಗೆ ಸಹಕರಿಸುವಂತೆ ಕಾರ್ಯದರ್ಶಿ ವಸಂತ ಹೋಬಳಿದಾರ್, ಎಂ. ಶ್ರೀಕಾಂತ್, ಧರಣೇಂದ್ರ ದಿನಕರ್, ಎನ್. ರಮೇಶ್ ಮನವಿ ಮಾಡಿದರು.
ರೊ. ವಿಜಯಕುಮಾರ್, ಪ್ರದೀಪ್ ಯಲಿ, ವಾಸುದೇವ್ ಸೇರಿದಂತೆ ವಾಣಿಜ್ಯ ಕೈಗಾರಿಕಾ ಸಂಘದ ಪ್ರಮುಖರು ಹಾಗೂ ವರ್ತಕರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!