ಜಡೆ ಸಂಸ್ಥಾನ ಮಠದ ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ ಕತೃ ಗದ್ದುಗೆಗೆ ಸಚಿವ ಮಧು ಬಂಗಾರಪ್ಪ ಭೇಟಿ
ಸೊರಬ: ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರ ಕತೃ ಗದ್ದುಗೆಗೆ ಮಂಗಳವಾರ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಭೇಟಿ ನೀಡಿ, ದರ್ಶನಾಶೀರ್ವಾದ ಪಡೆದರು.
ನಿರ್ಮಾಣ ಹಂತದಲ್ಲಿರುವ ಕತೃಗದ್ದುಗೆಯ ಶಿಲಾಮಯ ನೂತನ ಕಟ್ಟಡವನ್ನು ವೀಕ್ಷಿಸಿದ ಸಚಿವರು, ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಅವರಿಂದ ಮಾಹಿತಿ ಪಡೆದರು. ಸಚಿವರಾದ ತರುವಾಯ ಮೊದಲ ಭಾರಿಗೆ ಶ್ರೀ ಮಠಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಜಡೆ ಸಂಸ್ಥಾನ ಮಠದ ವತಿಯಿಂದ ಶ್ರೀ ಡಾ. ಮಹಾಂತ ಸ್ವಾಮೀಜಿ ಅವರು ಸಚಿವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಂತಾಪುರ ಮಠದಲ್ಲಿ ಪ್ರತಿವರ್ಷ ಜಾತ್ರೆ ಹಾಗೂ ಪ್ರತಿ ಅಮವಾಸ್ಯೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ವೇಳೆ ಅನ್ನ ಸಂತರ್ಪಣೆ ನಡೆಸಲಾಗುತ್ತದೆ. ಭಕ್ತರಿಗೆ ತಂಗಲು ಮತ್ತು ಕಾರ್ಯಕ್ರಮಗಳ ನಡೆಸಲು ಸಮುದಾಯ ಭವನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಮುದಾಯ ಭವನದ ಮುಂದುವರೆದ ಕಾಮಗಾರಿ ಪೂರ್ಣಗೊಳಿಸಲು ಒಂದು ಕೋಟಿ ರೂ., ಅನುದಾನದ ಅವಶ್ಯಕತೆ ಇದೆ. ಆದ್ದರಿಂದ ಸರ್ಕಾರದಿಂದ ಅನುದಾನ ಕೊಡಿಸಬೇಕಾಗಿ ಶಾಂತಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮನವಿ ಸಲ್ಲಿಸಿದರು.
ಜಿ.ಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಪ್ರಮುಖರಾದ ಸದಾನಂದ ಗೌಡ ಬಿಳಗಲಿ, ಆರ್.ಸಿ. ಪಾಟೀಲ್, ಚಂದ್ರಶೇಖರ ನಿಜಗುಣ, ಸಿ.ಪಿ.ಈರೇಶ ಗೌಡ, ಅಶೋಕ ನಾಯ್ಕ ಅಂಡಿಗೆ, ಕೆ. ನಾಗರಾಜ ಗೌಡ, ಬಸವರಾಜ ಸೇರಿದಂತೆ ಇತರರಿದ್ದರು.