ಧಾರಾಕಾರ ಮಳೆ ಹಿನ್ನೆಲೆ ; ಪ್ರವಾಸ ಮುಂದೂಡಲು ಚಿಕ್ಕಮಗಳೂರು ಜಿಲ್ಲಾಡಳಿತ ಮನವಿ
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಗಿರಿ, ಜಲಪಾತಗಳನ್ನು ವೀಕ್ಷಿಸಲು ಬರುವವರು ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಡಳಿತ ಪ್ರವಾಸಿಗರಲ್ಲಿ ಮನವಿ ಮಾಡಿದೆ.
ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತಿವೆ. ಆದ್ದರಿಂದ ಪ್ರವಾಸಿಗರು ಕೆಲವು ದಿನಗಳ ಮಟ್ಟಿಗೆ ಬರಬಾರದು.
ಅತಿಯಾದ ಮಳೆಗೆ ಧರೆ ಕುಸಿತವಾಗುವ ಸಂಭವ ಇರುವುದರಿಂದ ಹೋಂಸ್ಟೆ, ರೆಸಾರ್ಟ್ಟ್, ಅರಣ್ಯ ಇಲಾಖೆ ವತಿಯಿಂದ ಕೈಗೊಳ್ಳುವ ಚಾರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ನಗರಕ್ಕೆ ಕುಡಿಯುವ ನೀರು ಪೂರೈಸುವ ಹಿರೇಕೊಳಲೆ ಕೆರೆ ತುಂಬಿ ಕೋಡಿ ಬಿದ್ದಿದೆ. ಆಲ್ದೂರು ಸಮೀಪದ ಹವ್ವಳ್ಳಿ ಬಳಿ ಹುಲಿ ಹಳ್ಳಕ್ಕೆ ನಿರ್ಮಿಸಿದ್ದ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಕೊಪ್ಪ ತಾಲ್ಲೂಕಿನ ನಾರ್ವೆ-ಆರ್.ಡಿ.ಕೊಪ್ಪದಲ್ಲಿ ಭತ್ತದ ಗದ್ದೆ, ಅಡಿಕೆ ತೋಟಕ್ಕೆ ತುಂಗಾ ನೀರು ನುಗ್ಗಿದೆ. ಮುಳ್ಳಯ್ಯನಗಿರಿ ಭಾಗದಲ್ಲಿ ಸಣ್ಣದಾಗಿ ರಸ್ತೆ ಬದಿ ಕೊರಕಲು ಉಂಟಾಗಿದೆ.