ತೀರ್ಥಹಳ್ಳಿಯಲ್ಲಿ ನಡೆದ ಪ್ರತಿಮಾ ಅಂತ್ಯಕ್ರಿಯೆ
ತೀರ್ಥಹಳ್ಳಿ : ಗಣಿ, ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪ್ರತಿಮಾ ಬೆಂಗಳೂರಿನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದು ತೀರ್ಥಹಳ್ಳಿಯಲ್ಲಿಂದು ಅವರ ಅಂತ್ಯಕ್ರಿಯೆ ನಡೆಯಿತು.
ಪಟ್ಟಣದ ಸಮೀಪದ ತುಡುಕಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ – ವಿಧಾನ ನಡೆಸಿ ನಂತರ ಕುರುವಳ್ಳಿಯ ಹಿಂದೂ ರುದ್ರಭೂಮಿಯಲ್ಲಿ ಪ್ರತಿಮಾ ಪುತ್ರ ಪಾರ್ಥನಿಂದ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿಸಲಾಯಿತು.
ಈ ವೇಳೆ ಕುಟುಂಬಸ್ಥರು ಮಾತನಾಡಿ, ಪ್ರತಿಮಾ ಸಾವಿಗೆ ಕಾರಣರಾವರಿಗೆ ಸೂಕ್ತ ಶಿಕ್ಷೆ ನೀಡಬೇಕು. ದಕ್ಷ ಅಧಿಕಾರಿ ಹಾಗೂ ಪ್ರತಿಭಾವಂತ ಹೆಣ್ಣು ಮಗುವನ್ನು ಕಳೆದುಕೊಂಡಿದ್ದೇವೆ. ಸರ್ಕಾರ ಮಹಿಳಾ ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡಬೇಕು. ಸುಳ್ಳು ಸುದ್ದಿಗಳಿಗೆ ಜನರು ಕಿವಿಕೊಡಬೇಡಿ. ಅವರ ಕುಟುಂಬ ಅನ್ಯೋನ್ಯವಾಗಿತ್ತು. ದಂಪತಿಗಳು ತುಂಬಾ ಚನ್ನಾಗಿ ಇದ್ದರು. ಇಂತಹ ದಕ್ಷ ಅಧಿಕಾರಿಗಳನ್ನು ನಾವು ಕಳೆದುಕೊಂಡು ಬಡವರಾಗಿದ್ದೇವೆ. ಎಲ್ಲರಿಗೂ ಪ್ರತಿಮಾ ಮಾದರಿಯಾಗಿದ್ದರು ಎಂದರು.
ಪ್ರತಿಮಾ ಅಂತ್ಯಸಂಸ್ಕಾರದಲ್ಲಿ ಅವರ ಬಂಧು-ಬಳಗದವರು, ಗ್ರಾಮಸ್ಥರು ಸೇರಿ ನೂರಾರು ಜನ ಭಾಗಿಯಾಗಿದ್ದರು.