ನಾಡು, ನುಡಿ, ಜಲ, ಗಡಿ ವಿಚಾರಗಳು ಬಂದಾಗ ಪಕ್ಷಾತೀತವಾಗಿ ಸಮಸ್ಯೆ ಎದುರಿಸಬೇಕು
ಶಿವಮೊಗ್ಗ: ನಾಡು, ನುಡಿ, ಜಲ, ಗಡಿ ವಿಚಾರಗಳು ಬಂದಾಗ ಯಾವುದೇ ಸರ್ಕಾರವಿರಲಿ, ಪಕ್ಷಾತೀತವಾಗಿ ಸಮಸ್ಯೆಗಳನ್ನು ಎದುರಿಸಬೇಕು ಎಂದು ಮಾಜಿ ಶಾಸಕರ ಸಂಘದ ರಾಜ್ಯ ಅಧ್ಯಕ್ಷ ಹೆಚ್.ಎಂ. ಚಂದ್ರಶೇಖರಪ್ಪ ಹೇಳಿದರು.
ಅವರು ಇಂದು ಮೀಡಿಯಾ ಹೌಸ್ನಲ್ಲಿ ನಡೆದಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಪ್ರತಿ ಬಾರಿಯೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲಿ ಪ್ರಮುಖವಾಗಿ ಕಾವೇರಿ ನೀರಿನ ಸಮಸ್ಯೆ. ಈಗಾಗಲೇ ರಾಜ್ಯಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಹೀಗೆ ನೀರು ಹರಿಸುತ್ತಾ ಹೋದರೆ ಕರ್ನಾಟಕ ರಾಜ್ಯದ ರೈತರ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು ಹೇಗೆ. ಇಂತಹ ಸಂದರ್ಭಗಳಲ್ಲಿ ಪಕ್ಷಾತೀತವಾಗಿ ಒಂದಾಗಿ ಹೋರಾಟಬೇಕಾದ ಅವಶ್ಯಕತೆ ತುರ್ತಾಗಿದೆ ಎಂದರು.
ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು ಇಂದು ಅನಿವಾರ್ಯವಾಗಿದೆ. ನಾಡಿನ ಹಿತಾಸಕ್ತಿಗಾಗಿ ರಾಜಕಾರಣ ಮಾಡುವುದು ತರವಲ್ಲ. ಅಭಿವೃದ್ದಿಗೂ ರಾಜಕಾರಣಕ್ಕೂ ವ್ಯತ್ಯಾಸವಿವೆ.ಚುನಾವಣೆಗೂ ಮುನ್ನ ಆಯಾ ಪಕ್ಷದ ಸಿದ್ಧಾಂತಗಳು ಬೇರೆಬೇರೆಯಾಗಿಯೇ ಇರುತ್ತವೆ. ಆದರೆ ಹೊಸ ಸರ್ಕಾರ ರಚನೆ ಆದಾಗ ಒಟ್ಟಾರೆ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಬೇಕಾಗುತ್ತದೆ. ಇದಕ್ಕಾಗಿ ಹೋರಾಟ ಕೂಡ ಅನಿವಾರ್ಯವಾಗುತ್ತದೆ ಎಂದರು.
ಮಾಜಿ ಶಾಸಕರುಗಳ ಕೂಡ ನಾವೀಗ ಮಾಜಿ ಆಗಿದ್ದೇವೆ. ನಮ್ಮ ಕೆಲಸ ಏನೂ ಇಲ್ಲ ಎಂದು ಕುಳಿತುಕೊಳ್ಳಬಾರದು. ಇಲ್ಲಿಯೂ ಕೂಡ ಪಕ್ಷ ಮುಖ್ಯವಲ್ಲ. ಎಲ್ಲಾ ಮಾಜಿ ಶಾಸಕರು ಕೂಡ ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಾ ನಾಡು, ನುಡಿಯ ವಿಚಾರದಲ್ಲಿ ತಮ್ಮದೇ ಆದ ಸೇವೆ ಮಾಡಬೇಕು ಎಂದ ಅವರು, ಮುಂದಿನ ವಿಧಾನಸಭೆ ಕಲಾಪದಲ್ಲಿ ಎಲ್ಲರೂ ಕಾವೇರಿ ನೀರಿಗೆ ಸಂಬಂಧಿಸಿದಂತೆ ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಈ ಎಲ್ಲಾ ವಿಚಾರಗಳಿಗೆ ಪ್ರತಿರೂಪವಾಗಿ ಪಕ್ಷಾತೀತವಾಗಿ ದೊಡ್ಡ ಮಟ್ಟದ ಸಭೆಯನ್ನು ಕರೆಯಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರ ಸಂಘದ ನಿರ್ದೇಶಕ ಕೆ.ಜಿ. ಕುಮಾರಸ್ವಾಮಿ ಇದ್ದರು.