ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿ.ವೈ. ರಾಘವೇಂದ್ರ ಗೆಲುವು ಸಾಧಿಸಲಿದ್ದಾರೆ ; ಆರ್.ಎ. ಚಾಬುಸಾಬ್

0 179

ರಿಪ್ಪನ್‌ಪೇಟೆ : ಜಾತಿ ಬೇಧ ಭಾವನೆ ಇಲ್ಲದೆ ಸದಾ ಕ್ಷೇತ್ರದ ಮತದಾರರ ಮತ್ತು ಅಭಿವೃದ್ದಿಯ ಮೂಲದ್ಯೇಯದೊಂದಿಗೆ ಶ್ರಮಿಸುತ್ತಿರುವ ಸಂಸದ ಬಿ.ವೈ. ರಾಘವೇಂದ್ರರವರ ಈ ಬಾರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲದಿಂದಾಗಿ ನಾಲ್ಕು ಲಕ್ಷಕ್ಕೂ ಅಧಿಕ ಮತ ಗಳಿಸುವ ಮೂಲಕ ಜಯಭೇರಿ ಸಾಧಿಸಲಿದ್ದಾರೆಂದು ಜನತಾದಳ (ಎಸ್)ರಾಜ್ಯ ಜನತಾದಳ ಮುಖಂಡ ಆರ್.ಎ. ಚಾಬುಸಾಬ್‌ ಹೇಳಿದರು.

ರಿಪ್ಪನ್‌ಪೇಟೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯ ಹರಿಕಾರ, ಉತ್ತಮ ಕೆಲಸಗಾರ, ಪ್ರಾಮಾಣಿಕರಾಗಿರುವ ಬಿ.ವೈ.ರಾಘವೇಂದ್ರರವರು ಸಂಸತ್ ಸಭೆಯಲ್ಲಿ ಮಲೆನಾಡು ಭಾಗದ ಜ್ವಲಂತ ಸಮಸ್ಯೆಗಳನ್ನು ಸುಮಾರು 12 ಬಾರಿ ಸಂಸತ್ತಿನಲ್ಲಿ ಪ್ರಸ್ಥಾಪಿಸಿ ಅದನ್ನು ಕಾರ್ಯಗತ ಮಾಡುವಲ್ಲಿ ಸಫಲರಾಗಿದ್ದು, ಇನ್ನೂ ಜಿಲ್ಲೆಯ ಹಲವಾರು ಕಾಮಗಾರಿಗಳು ಮತ್ತು ಅಭಿವೃದ್ಧಿಯ ದೃಷ್ಠಿಯಿಂದ ಬಿ.ವೈ. ರಾಘವೇಂದ್ರರವರ ಗೆಲುವು ಮುಖ್ಯವಾಗಿದೆ. ದೇಶದ ದೃಷ್ಠಿಯಲ್ಲಿ ಸನ್ಮಾನ್ ಶ್ರೀ ನರೇಂದ್ರ ಮೋದಿಯವರು ಎಷ್ಟು ಮುಖ್ಯವೋ ಅಷ್ಟೆ ವಿಶ್ವಕ್ಕೆ ಸಹ ಮೋದಿಯವರ ಅವಶ್ಯಕತೆ ಇದೆ. ಪ್ರಪಂಚದಾದ್ಯಂತ ಭಾರತದ ಹೆಸರು ಮುಂಚೂಣಿಯಲ್ಲಿ ಬರಲು ನರೇಂದ್ರ ಮೋದಿಯವರ ಶ್ರಮ ಅತಿಮುಖ್ಯವಾಗಿದೆ.

ಈಗಾಗಲೇ ಬಿ.ವೈ. ರಾಘವೇಂದ್ರರವರ ನಾಮಪತ್ರ ಸಲ್ಲಿಸಿದ್ದು ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರು ಭಾಗವಹಿಸಿ ಜಿಲ್ಲೆಯ ಜೆಡಿಎಸ್‌ನ ಎಲ್ಲಾ ಕಾರ್ಯಕರ್ತರಿಗೆ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ ನೀಡಿದ್ದಾರೆ.

ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದವರು ಈಗಲಾದರೂ ಮುಖ್ಯ ವಾಹಿನಿಯಲ್ಲಿ ಸೇರಿ ಇವರ ಗೆಲುವಿಗೆ ಕಾರಣಕರ್ತರಾಗಬೇಕು. ಸಂಸದರಿಗೆ ಬರುವಂತ ಕೋಟ್ಯಂತರ ರೂಪಾಯಿ ಕೇಂದ್ರ ಸರ್ಕಾರದ ಅನುದಾನವನ್ನು ಅಲ್ಪಸಂಖ್ಯಾತರು ಪಡೆಯಲು ಇದೊಂದು ಸುಸಂದರ್ಭವಾಗಿದೆ. ರಾಷ್ಟ್ರಮಟ್ಟದಲ್ಲಿ ಸ್ವತಂತ್ರವಾಗಿ ಕೇಂದ್ರ ಸರ್ಕಾರ ಬರುವುದಕ್ಕೆ ನಾವು ಸಹ ಕೈಜೋಡಿಸಲು ಬದ್ಧರಾಗಿರುತ್ತೇವೆ. ಆದರೆ ಕಾಂಗ್ರೆಸಿನವರು ಕೇವಲ 254 ಸ್ಥಾನಕ್ಕೆ ಅಭ್ಯರ್ಥಿಗಳನ್ನು ಹಾಕಿ ಅಲ್ಪಸಂಖ್ಯಾತರಿಗೆ ನ್ಯಾಯಕೊಡಿಸಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರ ಜೊತೆಗೆ ಶಿವಸೇನೆಯಂತಹ ಕೋಮುಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು ಇವರಿಂದಲೂ ಅಲ್ಪಸಂಖ್ಯಾತ ಕಲ್ಯಾಣ ಹೇಗೆ ಆಗುತ್ತೆ ಎಂದು ಯೋಚಿಸುವುದು ಸೂಕ್ತವಾಗಿದೆ. ಅಲ್ಲದೆ “ತಲಾಕ್’’ ಜಾರಿಯಿಂದಾಗಿ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರು ಅದೃಶ್ಯರಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಹಾಗೆಯೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮುಸ್ಲಿಂ ಸಮದಾಯದವರು ಮೋದಿಯವರನ್ನು ಬೆಂಬಲಿಸುವ ಮೂಲಕ ಬಿ.ವೈ.ರಾಘವೇಂದ್ರರ ಗೆಲುವಿಗೆ ಸಹಕರಿಸಲು ಸಮುದಾಯದವರಲ್ಲಿ ಮನವಿ ಮಾಡಿದರು.

ಕೆ.ಎಸ್. ಈಶ್ವರಪ್ಪನವರು ಭಾರತೀಯ ಜನತಾ ಪಕ್ಷದಲ್ಲಿ ಉತ್ತಮ ಸ್ಥಾನಮಾನ ಪಡೆದುಕೊಂಡು ರಾಜ್ಯದ ಉಪಮುಖ್ಯಮಂತ್ರಿಗಳಾಗಿ, ವಿವಿಧ ಸಚಿವ ಸ್ಥಾನ ಪಡೆದು ಮುಂದೆ ರಾಜ್ಯಪಾಲರಾಗುವ ಅರ್ಹತೆ ಹೊಂದಿದ್ದರೂ ಈಶ್ವರಪ್ಪನವರು ಗೌರವಯುತವಾಗಿ ನಡೆದುಕೊಂಡಲ್ಲಿ ನರೇಂದ್ರ ಮೋದಿಯವರು ಖಂಡಿತವಾಗಿ ಅವರ ಕೈಬಿಡುವುದಿಲ್ಲ ಎಂದು ನಮ್ಮ ಅನಿಸಿಕೆ. ಈಗಲಾದರೂ ಮಾತೃಪಕ್ಷದ ಬಗ್ಗೆ ಒಮ್ಮೆ ಯೋಚನೆಮಾಡಿ ನಿರ್ಧಾರಕ್ಕೆ ಬರಲಿ ಎಂದು ತಿಳಿಸಿದರು.

ಜನತಾದಳದ ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿ ಜನತಾದಳದ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಇವರ ಗೆಲುವಿಗೆ ಶ್ರಮಿಸಬೇಕೆಂದು ಶಿವಮೊಗ್ಗ ಜಿಲ್ಲಾ ಜಾತ್ಯಾತೀತ ಜನತಾದಳದ ಉಪಾಧ್ಯಕ್ಷರಾದ ಜಿ.ಎಸ್. ವರದರಾಜ್ ಹಾಗೂ ಹೊಸನಗರ ತಾಲ್ಲೂಕು ಜೆಡಿಎಸ್ ಅಧ್ಯಕ್ಷರಾದ ಎನ್. ವರ್ತೇಶ್, ರಾಜ್ಯ ಜಾತ್ಯಾತೀತ ಜನತಾದಳದ ಕಾರ್ಯದರ್ಶಿ ಹೆಚ್.ಕೆ.ಅಬ್ದುಲ್‌ವಾಜಿದ್, ಜೆಡಿಎಸ್ ಜಿಲ್ಲಾ ಮುಖಂಡ ಸೈಯದ್‌ಇಬ್ರಾಹಿಂ ರವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

Leave A Reply

Your email address will not be published.

error: Content is protected !!