ಮೂವರು ಸಚಿವರ ರಾಜೀನಾಮೆಗೆ ಕೆಎಸ್ಈ ಒತ್ತಾಯ

0 99

ಶಿವಮೊಗ್ಗ : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವರಾದ ಭೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್, ಈ ಮೂವರು ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳೇ ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಇಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

ಅವರ ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.ಕೆ. ಶಿವಕುಮಾರ್ ಅವರ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಹಾಗೆಯೇ ಸಚಿವ ಭೈರತಿ ಸುರೇಶ್ ಆಪ್ತರು ಎನ್ನಲಾದ ಮೌನೇಶ್, ರಾಘವೇಂದ್ರ ಮುಂತಾದವರು ನಕಲಿ ವೋಟರ್ ಐಡಿ, ಪಾನ್ ಕಾರ್ಡ್, ಆಧಾರ್ ಕಾರ್ಡ್‌ಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ ಶಿವಕುಮಾರ್ ಎಂಬ ಯುವಕ ನನ್ನ ಸಾವಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ಅವರೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂರೂ ಪ್ರಕರಣಗಳು ತುಂಬಾ ಗಂಭೀರವಾದವು. ಆದ್ದರಿಂದ ಈ ಮೂವರು ಸಚಿವರು ತಕ್ಷಣವೇ ರಾಜೀನಾಮೆ ಕೊಡಬೇಕು ಎಂದರು.

ಡಿ.ಕೆ. ಶಿವಕುಮಾರ್ ತಾನೊಬ್ಬ ಸತ್ಯಹರಿಶ್ಚಂದ್ರ
ಎಂಬಂತೆ ಮಾತನಾಡುತ್ತಿದ್ದಾರೆ. ಅವರು ಮತ್ತೊಮ್ಮೆ ಜೈಲಿಗೆ ಹೋಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಹೀಗೆಂದು ಹೇಳಿದ್ದಕ್ಕೆ ಈಶ್ವರಪ್ಪ ಜಡ್ಜಾ ಎಂದು ಅವರು ಕೇಳಿದ್ದರು. ಆದರೆ ಅವರದೇ ಪಕ್ಷದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರೋಪ ಮುಕ್ತರಾಗಿ ಬರುತ್ತಾರೆ ಎಂದು ಹೇಳಿದ್ದಾರೆ. ಹಾಗಾದರೆ ಅವರು ಜಡ್ಜೇ ? ಎಂದು ಪ್ರಶ್ನಿಸಿದ ಅವರು, ಇನ್ನು ಮೂರು ತಿಂಗಳೊಳಗೆ ವಿಚಾರಣೆ ಮುಗಿಯುತ್ತದೆ. ಅಷ್ಟರಲ್ಲಿಯೇ ಅವರು ಜೈಲಿಗೆ ಹೋಗುವುದು ಖಚಿತ ಎಂದು ಅವರು ಪುನರುಚ್ಚರಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಏನೆಲ್ಲಾ ಅವಾಂತರಗಳು ನಡೆಯುತ್ತವೆ ಎಂಬುದಕ್ಕೆ ನಕಲಿ ವೋಟ್ ಐಡಿ ಸೃಷ್ಟಿಯೇ ಕಾರಣವಾಗಿದೆ. ಅದರಲ್ಲೂ ಈ ಸೃಷ್ಟಿಕರ್ತರು ಸಚಿವರ ಆಪ್ತರು ಎಂದು ತಿಳಿದುಬಂದಿದೆ. ನಕಲಿ ವೋಟರ್ ಐಡಿ ಮಾಡುವುದು ಸಾಮಾನ್ಯ ವಿಷಯವೇ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುತ್ತದೆ. ಎಷ್ಟು ವರ್ಷದಿಂದ ಮಾಡುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ಉದ್ದೇಶ ಇದಕ್ಕಿದೆಯೇ ಎಂಬುದು ತನಿಖೆಯಾಗಬೇಕು. ಈ ಘಟನೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದರು.

ಹಾಗೆಯೇ ಯುವಕನೊಬ್ಬ ನನ್ನ ಸಾವಿಗೆ ಸಚಿವ ಶರಣ ಪ್ರಕಾಶ್ ಪಾಟೀಲ್ ಕಾರಣ ಎಂದು ಬರೆದಿರುವುದಲ್ಲದೆ ವಿಡಿಯೋ ಕೂಡ ಮಾಡಿದ್ದಾರೆ. ಈ ಹಿಂದೆ ಇಂತಹುದೇ ಘಟನೆಗೆ ಸಂಬಧಿಸಿದಂತೆ ನನ್ನ ಬಗ್ಗೆ ಆರೋಪ ಬಂದಾಗ ನಾನು ತಕ್ಷಣವೇ ರಾಜೀನಾಮೆ ಕೊಟ್ಟಿದ್ದೆ. ಹಾಗೆಯೇ ಶರಣ ಪ್ರಕಾಶ್ ಪಾಟೀಲ್ ಕೂಡ ರಾಜೀನಾಮೆ ನೀಡಬೇಕು ಎಂದರು.

ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಎಲ್ಲಾ ಭಾಗ್ಯಗಳು ವಿಫಲವಾಗಿವೆ. ಶಿವಮೊಗ್ಗ ದಸರಾಕ್ಕೆ 20ಲಕ್ಷ ಕೊಡುತ್ತಾರೆ ಎಂದರೆ ಸರ್ಕಾರದ ಸ್ಥಿತಿ ಎಲ್ಲಿಗೆ ಬಂದಿದೆ ಎಂದು ತಿಳಿಯಬಹುದು. ಆ ಹಣ ನಮಗೆ ಬೇಡ. ಶಿವಮೊಗ್ಗದ ಜನರು ನಾವೇ ಸೇರಿ ಹಬ್ಬ ಮಾಡುತ್ತೇವೆ ಎಂದರು.

ಸಚಿವ ಎಂ.ಬಿ. ಪಾಟೀಲ್ ಈಶ್ವರಪ್ಪನವರು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಿದ್ದಾರೆ. ಇದು ಅರ್ಥವಿಲ್ಲದ ಮಾತು. ನಾನು ನನ್ನ ದೇಶ, ಧರ್ಮ, ಪಕ್ಷದ ಮೇಲೆ ನಿಷ್ಠೆ ಇಟ್ಟವನು. ಕಾಂಗ್ರೆಸ್ ಸೇರಿದರೆ ನನ್ನ ತಾಯಿಗೆ ದ್ರೋಹ ಬಗೆದಂತೆ. ಎಂ.ಬಿ.ಪಾಟೀಲ್ ಹಿರಿಯರಿದ್ದಾರೆ. ಅವರು ಕ್ಷಮೆ ಕೇಳಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಶಿವರಾಜ್, ಸುಧೀಂದ್ರ ಚಂದ್ರಶೇಖರ್, ಇದ್ದರು.

Leave A Reply

Your email address will not be published.

error: Content is protected !!