ನಿಗೂಢ ವಸ್ತು ಸ್ಫೋಟ, ಇಬ್ಬರಿಗೆ ಗಾಯ !

0 554

ಶಿಕಾರಿಪುರ : ಇಂದು ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ತಾಲೂಕಿನ ಶಿರಾಳಕೊಪ್ಪ ಬಸ್ ನಿಲ್ದಾಣ ಸಮೀಪ ನಿಗೂಢ ವಸ್ತು ಸ್ಫೋಟವಾಗಿದೆ.

ಬಸ್ ನಿಲ್ದಾಣ ಬಳಿ ರಸ್ತೆಯ ಫುಟ್‌ಪಾತ್ ನಲ್ಲಿ ನಿಗೂಢ ವಸ್ತು ಸ್ಫೋಟವಾಗಿದ್ದು, ಇಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ.

ಕೂಡಲೇ ಗಾಯಾಳುಗಳನ್ನು ಶಿಕಾರಿಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬ್ಯಾಗ್ ನಲ್ಲಿದ್ದ ವಸ್ತು ಏಕಾಏಕಿ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲಿ ಕೆಲ ಸಮಯ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಶಿರಾಳಕೊಪ್ಪ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಂದಿ ಶಿಕಾರಿಗೆ ಬಳಸುವ ನಾಡಾ ಬಾಂಬ್ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ.

ಹಾವೇರಿ ಜಿಲ್ಲೆಯ ಕೊಪ್ಪರಸಿಕೊಪ್ಪ ಗ್ರಾಮದ ಉಮೇಶ್ ಮತ್ತು ಆತನ ಪತ್ನಿ ರೂಪಾ ಗೊಲ್ಲರ್ ಸಂತೆಗೆ ಬಂದಿದ್ದರು. ದಂಪತಿ ರಸ್ತೆ ಬದಿ ಆಂಥೋಣಿ ಎಂಬವರಿಂದ ಬೆಡ್ ಶೀಟ್ ಖರೀದಿ ಮಾಡಿದ್ದರು. ಬಳಿಕ ಅದೇ ಆಂಥೋಣಿ ಅವರ ಅಂಗಡಿಯಲ್ಲಿ ಬ್ಯಾಗ್ ಇಟ್ಟು, ಸಂತೆಗೆ ತೆರಳಿದ್ದರು.

ದಂಪತಿ ತೆರಳಿದ ಬಳಿಕ ಬ್ಯಾಗ್ನಲ್ಲಿದ್ದ ಸಿಡಿಮದ್ದು ಸ್ಫೋಟಗೊಂಡಿದೆ. ಅಂಗಡಿಯಲ್ಲಿದ್ದ ಆಂಥೋಣಿ ಮತ್ತು ಮತ್ತೋರ್ವರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ ನೀಡಿದ್ದು, ಸಿಡಿಮದ್ದು ಸ್ಫೋಟಗೊಂಡಿದ್ದನ್ನು ಖಚಿತಪಡಿಸಿದ್ದಾರೆ.

ದಂಪತಿ ಪೊಲೀಸರ ವಶಕ್ಕೆ

ಸದ್ಯ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು, ವಿಚಾರಣೆ ಆರಂಭಿಸಿದ್ದಾರೆ. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!