ರಾತ್ರಿ ವೇಳೆ ಕಲ್ಲುಗಣಿ ಸ್ಫೋಟ ; ಕ್ರಮಕ್ಕೆ ಆಗ್ರಹ
ಹೊಸನಗರ ; ತಾಲೂಕಿನ ಜಯನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟೆಂಕಬೈಲು ಗ್ರಾಮದ ಕಲ್ಲುಕ್ರಷರ್ ಘಟಕ ಕಲ್ಲುಗಣಿಯಲ್ಲಿ ರಾತ್ರಿ ವೇಳೆ ಸ್ಫೋಟ ನಡೆಸಲಾಗುತ್ತಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರೇಡ್- ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಅವರಿಗೆ ದೂರು ಸಲ್ಲಿಸಿ, ಕೆಲ ದಿನಗಳಿಂದ ಕ್ರಷರ್ ಜೋನ್ನಲ್ಲಿರುವ ಎಚ್.ಎಲ್.ಉಮೇಶ್ ಹಾಲಗದ್ದೆ ಎಂಬುವವರ ಕಲ್ಲುಕ್ರಷರ್ನಲ್ಲಿ ರಾತ್ರಿ ಹತ್ತು ಗಂಟೆಯ ವರೆಗೆ ಕಾರ್ಯ ನಿರ್ವಹಿಸಲಾಗುತ್ತಿದೆ. ಸಂಜೆ 7 ಗಂಟೆಯ ಬಳಿಕ ಕಲ್ಲುಬಂಡೆಗಳ ಸ್ಫೋಟ ನಡೆಸುತ್ತಿದ್ದಾರೆ. ಇದರಿಂದ ಗ್ರಾಮದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ವಯೋವೃದ್ಧರು, ಮಕ್ಕಳಿಗೆ ಸರಿಯಾಗಿ ನಿದ್ರಿಸಲೂ ಆಗುತ್ತಿಲ್ಲ ಎಂದು ಆಪಾದಿಸಿದ್ದಾರೆ.
ಈ ಬಗ್ಗೆ ಕ್ರಷರ್ ಸಿಬ್ಬಂದಿಗಳಿಗೆ ತಿಳಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಾರೆ. ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ದೂರಿದ ಗ್ರಾಮಸ್ಥರು, ಕೂಡಲೇ ತಾಲೂಕು ಆಡಳಿತ ಈ ಬಗ್ಗೆ ಗಮನ ಹರಿಸಬೇಕು. ತಮ್ಮ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಕೋರಿದರು. ಈ ವೇಳೆ ಕೊಲ್ಲಪ್ಪ, ವಿನಾಯಕ ಹಾಗೂ ಸ್ಥಳೀಯ ನಿವಾಸಿಗಳು ಇದ್ದರು.