ಶಿವಮೊಗ್ಗ: ವ್ಯಾಪಾರಕ್ಕಾಗಿ ವಿದೇಶಕ್ಕೆ ಕರೆದೊಯ್ದ ಗಂಡನೇ ಮತ್ತೊಬ್ಬ ಮಹಿಳೆಯ ಜೊತೆ ತೆರಳಿ, ಪತ್ನಿಯನ್ನು ಪರದೇಶದಲ್ಲೇ ಸಂಕಷ್ಟಕ್ಕೆ ತಳ್ಳಿದ ಆರೋಪವೊಂದು ಶಿವಮೊಗ್ಗ ಮೂಲದ ಕುಟುಂಬದಲ್ಲಿ ಬೆಳಕಿಗೆ ಬಂದಿದೆ. ಪಾಸ್ಪೋರ್ಟ್ ಮತ್ತು ಸುಮಾರು ₹10 ಲಕ್ಷ ನಗದು ಕಳೆದುಕೊಂಡಿರುವ ಮಹಿಳೆ ಇದೀಗ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದು, ತನ್ನನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಮಾಹಿತಿಯ ಪ್ರಕಾರ, ಶಿವಮೊಗ್ಗದ ಸದಾಶಿವಪುರ ಹಕ್ಕಿಪಿಕ್ಕಿ ಕ್ಯಾಂಪ್ನ ಜಲಕನ್ಯಾ ಎಂಬ ಮಹಿಳೆ ಸುಮಾರು ಎಂಟು ವರ್ಷಗಳ ಹಿಂದೆ ಗುರುದತ್ ಎಂಬಾತನನ್ನು ವಿವಾಹವಾಗಿದ್ದರು. ದಂಪತಿ ಸಾಂಪ್ರದಾಯಿಕ ಗಿಡಮೂಲಿಕೆ ವ್ಯಾಪಾರದ ನಿಮಿತ್ತ ಕಳೆದ ನಾಲ್ಕೈದು ವರ್ಷಗಳ ಹಿಂದೆ ಸೆನೆಗಲ್ಗೆ ತೆರಳಿದ್ದರು ಎನ್ನಲಾಗಿದೆ.
ಆದರೆ ಅಲ್ಲಿ ವಾಸವಿದ್ದ ಅವಧಿಯಲ್ಲಿ ಗುರುದತ್ಗೆ ಮತ್ತೊಬ್ಬ ಮಹಿಳೆಯ ಪರಿಚಯವಾಗಿದ್ದು, ಬಳಿಕ ಪತ್ನಿಯನ್ನು ಬಿಟ್ಟು ಆಕೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಜಲಕನ್ಯಾ ಆರೋಪಿಸಿದ್ದಾರೆ. ಈ ವೇಳೆ ತನ್ನ ಬಳಿಯಿದ್ದ ಪಾಸ್ಪೋರ್ಟ್ ಹಾಗೂ ಸುಮಾರು ₹10 ಲಕ್ಷ ನಗದು ಸಹ ತೆಗೆದುಕೊಂಡು ಹೋಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆ ಕಾರಣದಿಂದ ಜಲಕನ್ಯಾ ವಿದೇಶದಲ್ಲೇ ಸಂಕಷ್ಟಕ್ಕೆ ಸಿಲುಕಿದ್ದು, ಭಾರತಕ್ಕೆ ಹಿಂತಿರುಗಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಹಣಕಾಸಿನ ತೊಂದರೆ, ದಾಖಲೆಗಳ ಕೊರತೆ ಮತ್ತು ಅನ್ಯ ದೇಶದ ಪರಿಸ್ಥಿತಿ ಕಾರಣದಿಂದ ಅವರು ಮಾನಸಿಕವಾಗಿ ಕೂಡ ಕುಗ್ಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಮ್ಮ ಗಂಡ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು, ಆತನ ಪಾಸ್ಪೋರ್ಟ್ ಮತ್ತು ವೀಸಾವನ್ನು ರದ್ದುಪಡಿಸಬೇಕು, ಜೊತೆಗೆ ಭಾರತೀಯ ರಾಯಭಾರ ಕಚೇರಿ ಮಧ್ಯಪ್ರವೇಶಿಸಿ ತನ್ನನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆಸಿಕೊಳ್ಳಬೇಕು ಎಂದು ಜಲಕನ್ಯಾ ಕಣ್ಣೀರಿನ ಮನವಿ ಮಾಡಿದ್ದಾರೆ.
ಈ ಘಟನೆ ಇದೀಗ ಶಿವಮೊಗ್ಗ ಜಿಲ್ಲೆಯ ಜನರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ವಿದೇಶದಲ್ಲಿರುವ ಭಾರತೀಯರ ಭದ್ರತೆ ಮತ್ತು ದಾಖಲೆಗಳ ರಕ್ಷಣೆಯ ಪ್ರಶ್ನೆಯನ್ನೂ ಮತ್ತೆ ಮುಂದಿಟ್ಟಿದೆ. ಸಂಬಂಧಿತ ಇಲಾಖೆಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮಹಿಳೆಗೆ ಅಗತ್ಯ ನೆರವು ಒದಗಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

