ರಿಪ್ಪನ್ಪೇಟೆ ; ಮಕ್ಕಳಲ್ಲಿ ವ್ಯವಹಾರದ ಜ್ಞಾನ ಹೆಚ್ಚಿಸುವ ಮೂಲಕ ಮಕ್ಕಳು ನಾವು ಯಾರಿಗೇನು ಕಡಿಮೆಯಿಲ್ಲ ಎಂದು ತೋರಿಸುತ್ತಾರೆಂಬುದಕ್ಕೆ ನಿಜವಾಗಿ ಇಂದು ರಿಪ್ಪನ್ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ನಡೆದ ಮಕ್ಕಳ ಸಂತೆ ಸಾಕ್ಷಿ ಕರಿಸುವ ಮೂಲಕ ಪೋಷಕರನ್ನು ಮತ್ತು ಸಾರ್ವಜನಿಕರನ್ನು ಮೂಕಪ್ರೇಕ್ಷಕರನ್ನಾಗಿ ಮಾಡಿತು.

ಬಳಪ ಹಿಡಿಯುವ ಕೈಯಲ್ಲಿ ಮಕ್ಕಳು ತರಕಾರಿಗಳನ್ನು ತಕ್ಕಡಿಯಲ್ಲಿ ತೂಗಿ ಗ್ರಾಹಕರಿಂದ ಹಣವನ್ನು ಪಡೆಯುತ್ತಿದ್ದ ದೃಶ್ಯ ಕಂಡು ಪೋಷಕ ವರ್ಗ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತು.

ಮೂಲಂಗಿ, ಬದನೆಕಾಯಿ, ಹಸಿಮೆಣಸಿನಕಾಯಿ, ಅವರೆಕಾಯಿ, ಹಾಗಲಕಾಯಿ, ತೆಂಗಿನಕಾಯಿ, ಪಪ್ಪಾಯಿ, ಮಂಡಕ್ಕಿ, ಪಾನಿಪೂರಿ, ಜ್ಯೂಸ್ ಹೀಗೆ ದಿನಸಿ ಸಾಮಾನು ಸೇರಿದಂತೆ ಸ್ಟೇಷನರಿ ಸಾಮಾಗ್ರಿಗಳ ಮಾರಾಟದಲ್ಲಿ ಮಕ್ಕಳು ಪೋಷಕರನ್ನು ಮತ್ತು ಗ್ರಾಹಕರನ್ನು ಸಾರ್ವಜನಿಕರನ್ನು ತಮ್ಮತ್ತ ಆಕರ್ಷಿಸುವ ದೃಶ್ಯ ಕಂಡು ಹಲವರು ಬೆರಗಾಗಿ ನೋಡುವಂತೆ ಮಾಡಿತು.

ಇಲ್ಲಿನ ಸರ್ಕಾರಿ ಹಿರಿಯ ಮಾದರಿ ಪಾಠಶಾಲೆಯ ಒಂದನೇ ತರಗತಿಯಿಂದ ಏಳನೇ ತರಗತಿಯ ಪುಟಾಣಿ ಮಕ್ಕಳು ತಮ್ಮ ಪೋಷಕರ ಸಹಕಾರದೊಂದಿಗೆ ತಾವು ತಂದಂತಹ ತರಕಾರಿ, ಹಣ್ಣು-ಹಂಪಲು ಹಾಗೂ ಹೂವಿನ ವ್ಯಾಪಾರದಲ್ಲಿ ತಮ್ಮ ಬಳಿ ಗ್ರಾಹಕರನ್ನು ಸೆಳೆದುಕೊಳ್ಳಲು ಯಶಸ್ವಿಯಾದರು.

ಪಪ್ಪಾಯಿ 30 ರೂ. ಕೆ.ಜಿ. ಆದರೆ ಅವರೆಕಾಯಿ 20 ರೂ., ಬದನೆಕಾಯಿ 30 ರೂ., ಬಾಳೆದಿಂಡು 20 ರೂ., ನೆಲ್ಲಿಕಾಯಿ 10 ರೂ., ಕುಂಬಳಕಾಯಿ ಕೆ.ಜಿ.ಗೆ 20 ರೂ. ಹೀಗೆ ದರ ಪಟ್ಟಿ ಹಾಕಿ ವ್ಯಾಪಾರ ಮಾಡುತ್ತಿದ್ದ ಮಕ್ಕಳ ಬಳಿ ಹೋಗಿ ತರಕಾರಿಯ ಬೆಲೆ ಕೇಳಿ ಮಕ್ಕಳನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದರೂ ಕೂಡಾ ತಮ್ಮ ಸಮಯ ಪ್ರಜ್ಞೆ, ಜಾಣ್ಮೆಯಿಂದ ಮಕ್ಕಳು ತರಕಾರಿಯ ಮೇಲೆ ಕಗ್ಗಾವಲು ಇಟ್ಟು ಎಲ್ಲಿಯೂ ಮೋಸವಾಗದಂತೆ ಮುಂಜಾಗ್ರತೆ ವಹಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಯಿತು.

ಮಕ್ಕಳ ಸಂತೆಯನ್ನು ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಉದ್ಘಾಟಿಸಿದರು. ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಹೆಚ್.ಎನ್.ಉಮೇಶ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜಪ್ಪ, ಶಾಲಾ ಮುಖ್ಯೋಪಾಧ್ಯಾರು ಶಿಕ್ಷಕ ವೃಂದ ಹಾಜರಿದ್ದರು.
ಒಟ್ಟಾರೆಯಾಗಿ ವ್ಯಾಸಂಗದ ಜೊತೆ ಯಾವು ಏನಾದರೊಂದು ಸಾಧನೆ ಮಾಡುತ್ತೇವೆಂಬ ಉತ್ಸಾಹದಲ್ಲಿ ಮಕ್ಕಳು ತರಕಾರಿ ದಿನಸಿ ಸಾಮಾನು ಪಾನಿಪೂರಿ, ಮಸಾಲ ಮಂಡಕ್ಕಿ ಹೀಗೆ ಬಗೆಬಗೆಯ ವಸ್ತುಗಳ ಮಾರಾಟ ಮಾಡಲು ನಾವು ಸದಾಸಿದ್ದ ಎಂಬುದನ್ನು ಸಾಬೀತು ಪಡಿಸಿದರು.

ಮಕ್ಕಳ ಈ ಚಾಣಾಕ್ಷತನಕ್ಕೆ ಸಾರ್ವಜನಿಕರು ಗುಂಪು ಗುಂಪಾಗಿ ಅಲ್ಲಲ್ಲಿ ನಿಂತು ಚರ್ಚಿಸುತ್ತಿದ್ದ ದೃಶ್ಯ ಕಂಡು ಪೋಷಕರು ಹರ್ಷ ವ್ಯಕ್ತಪಡಿಸುತ್ತಿದ್ದು ವಿಶೇಷವಾಗಿತ್ತು.