ಹೊಂಬುಜ : ಜೈನ ಧರ್ಮದ ಇಪ್ಪತ್ತಮೂರನೇಯ ತೀರ್ಥಂಕರರಾಗಿ ಆರಾಧಿಸುವ ಭಗವಾನ ಶ್ರೀ ಪಾರ್ಶ್ವನಾಥ ತೀರ್ಥಂಕರರ ಜನ್ಮಕಲ್ಯಾಣ ಸುದಿನವನ್ನು ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ ಪಾರ್ಶ್ವನಾಥ ಸ್ವಾಮಿ ಮಂದಿರದಲ್ಲಿ ಆಚರಿಸಲಾಯಿತು.

ಆಚಾರ್ಯ 108 ಶ್ರೀ ಅನೇಕಾಂತಸಾಗರಜೀ ಮುನಿಮಹಾರಾಜರವರು, ಸಂಘಸ್ಥ ಮುನಿವರ್ಯರು ಶ್ರೀ ಪಾರ್ಶ್ವನಾಥ ತೀರ್ಥಂಕರರ ಬಿಂಬವನ್ನು ರಜತ ಪಲ್ಲಕ್ಕಿಯಲ್ಲಿ ಶ್ರೀ ಹೊಂಬುಜ ಶ್ರೀಜೈನಮಠದ ಪೀಠಾಧೀಶರಾಗಿರುವ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಯಿತು.

“ಶ್ರೀ ಪಾರ್ಶ್ವನಾಥ ತೀರ್ಥಂಕರರು ಬೋಧಿಸಿದ ಉಪದೇಶಗಳು ಪ್ರತಿಯೋರ್ವರೂ ಧರ್ಮಪಥದಲ್ಲಿ ಜೀವನ ನಿರ್ವಹಿಸಿದರೆ ಉಪಸರ್ಗಗಳು ನಿವಾರಣೆಯಾಗಿ ಸಂತೃಪ್ತ ಸುಖ-ಶಾಂತಿ ಲಭಿಸುತ್ತದೆ” ಎಂದು ಸ್ವಸ್ತಿಶ್ರೀಗಳವರು ಪ್ರವಚನದಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಜೀವನ ವೃತ್ತಾಂತವನ್ನು ಸ್ಮರಿಸಿದರು.
ಲೇಖನವನ್ನು ಮುಂದುವರಿಸಿ ಓದಿ
ಶ್ರೀ ಪಾರ್ಶ್ವನಾಥ ಸ್ವಾಮಿ ಸ್ತ್ರೋತ್ರ, ಜಿನಭಜನೆಯನ್ನು ಭಕ್ತವೃಂದದವರು ಪೂಜಾ ವಿಧಿ-ವಿಧಾನಗಳಲ್ಲಿ ಸ್ತುತಿಸಿದರು. ಪುರೋಹಿತ ಪದ್ಮರಾಜ ಇಂದ್ರರವರು ಆಗಮೋಕ್ತ ವಿಧಿಯಲ್ಲಿ ಪೂಜಾ ವಿಧಾನಗಳನ್ನು ಪೂಜ್ಯ ಮುನಿಶ್ರೀಗಳವರ, ಸ್ವಸ್ತಿಶ್ರೀಗಳವರ ಸಾನಿಧ್ಯದಲ್ಲಿ ನೆರವೇರಿಸಿದರು.

ಹೊಂಬುಜ ಅತಿಶಯ ಶ್ರೀಕ್ಷೇತ್ರದ ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯ ವಿಶೇಷ ಪೂಜೆಯನ್ನು ಸಮರ್ಪಿಸಲಾಯಿತು. ಮಕರ ಸಂಕ್ರಾಂತಿಯ ಶುಭ ದಿನವಾಗಿದ್ದು ಭಕ್ತವೃಂದದವರು ತಮ್ಮ ಇಷ್ಟಾರ್ಥ ನೆರವೇರಲು ಪ್ರಾರ್ಥಿಸಿದರು.

