ಹೊಸನಗರ ; ಸಂಘ-ಸಂಸ್ಥೆಗಳು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಓದಿ ಮುಂದಿನ ಅವರ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಮಾಮ್ಕೋಸ್ ನಿರ್ದೇಶಕ ಕೆ.ವಿ. ಕೃಷ್ಣಮುರ್ತಿ ಹೇಳಿದರು.
ಎಪಿಎಂಸಿ ಆವರಣದಲ್ಲಿರುವ ಮಾಮ್ಕೋಸ್ ಹೊಸನಗರ ಶಾಖೆಯ ಕಚೇರಿ ಆವರಣದಲ್ಲಿ ಸಂಸ್ಥೆಯ ವತಿಯಿಂದ 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮತ್ತು ಉನ್ನತ ಶಿಕ್ಷಣದಲ್ಲಿ ಅತೀ ಹೆಚ್ಚು ಅಂಕ ಗಳಿಸಿ ತೇರ್ಗಡೆ ಹೊಂದಿದ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ತಮ್ಮ ಷೇರುದಾರರ ಮಕ್ಕಳಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವುದರ ಜೊತೆಗೆ ನಗದು ನೀಡಿ ಮಾತನಾಡಿದರು.

ನಾವು ನೀಡುವ ನಗದು ಅವರಿಗೆ ಶಾಶ್ವತವಾಗಿ ಉಳಿಯುವುದಿಲ್ಲ ಆದರೆ ನಾವು ಮಾಡುವ ಸನ್ಮಾನವನ್ನು ಅವರ ಜೀವನದಲ್ಲಿಯೇ ನೆನಪಿನಲ್ಲಿ ಉಳಿಯುತ್ತದೆ. ಯಾವುದೇ ರೀತಿಯಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಸನ್ಮಾನಿಸುವುದರಿಂದ ವಿದ್ಯಾರ್ಥಿಗಳ ಜೀವನ ಭವಿಷ್ಯದಲ್ಲಿ ಒಳ್ಳೆಯ ರೂಪುಗೊಳ್ಳುತ್ತದೆ. ಎಲ್ಲ ಸಂಘ-ಸಂಸ್ಥೆಗಳು ಉತ್ತಮ ಅಂಕ ಪಡೆದವರಿಗೆ ಕ್ರೀಡೆಯಲ್ಲಿ ಸಾಧನೆ ಮಾಡಿರುವರನ್ನು ಹಲವು ರಂಗಗಳಲ್ಲಿ ಸಾಧನೆ ಮಾಡಿರುವವರನ್ನು ಗೌರವಿಸಿ ಸನ್ಮಾನಿಸಿ ಎಂದು ಈ ಮೂಲಕ ಕರೆ ನೀಡಿದರು.
ಲೇಖನವನ್ನು ಮುಂದುವರಿಸಿ ಓದಿ
ಮಾಮ್ಕೋಸ್ ಹೊಸನಗರ ಶಾಖೆಯ ಸ್ಥಳೀಯ ನಿರ್ದೇಶಕರಾದ ಕೆ.ವಿ. ಕೃಷ್ಣಮೂರ್ತಿ ಮತ್ತು ಧರ್ಮೇಂದ್ರ ಹೆಚ್ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಗೌರವ ಸಮರ್ಪಣ ಕಾರ್ಯಕ್ರಮದಲ್ಲಿ ಷೇರುದಾರರು, ಶಾಖೆಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

