ಗ್ರಾಮ ಸಹಾಯಕರಿಲ್ಲದೆ ಕಂದಾಯ ಇಲಾಖೆಯ ಕಾರ್ಯ ನಿರ್ವಹಣೆ ಅಸಾಧ್ಯ ; ರಾಜ್ಯಾಧ್ಯಕ್ಷ ದೇವರಾಜ್

Written by Mahesha Hindlemane

Published on:

ಹೊಸನಗರ : ಕಂದಾಯ ಇಲಾಖೆಗೆ ಒಳಪಡುವ ಗ್ರಾಮಗಳಲ್ಲಿ ಮಗು ಹುಟ್ಟಿದರೆ, ಗ್ರಾಮಸ್ಥರು ಮರಣ ಹೊಂದಿದರೆ ಯಾವುದೇ ಸಮಸ್ಯೆಗಳು ಆದರೂ ಎಲ್ಲ ಕೆಲಸಗಳಿಗೂ ಎಲ್ಲ ಕಂದಾಯ ಇಲಾಖೆಯ ಅಧಿಕಾರಿಗಳಿಗಿಂತ ಮುಂಚಿತವಾಗಿ ಗ್ರಾಮ ಸಹಾಯಕರು ಹೋಗುತ್ತಾರೆ. ಎಲ್ಲ ಕೆಲಸಗಳಿಗೂ ದೀಪಗಳಿಗೆ ಬತ್ತಿ ಹೇಗೊ ಎಲ್ಲ ಕೆಲಸಗಳಿಗೆ ಗ್ರಾಮ ಸಹಾಯಕರು ಬೇಕೇ ಬೇಕು. ಇವರು ಇಲ್ಲವಾದರೆ ಕಂದಾಯ ಇಲಾಖೆಯಲ್ಲಿ ಒಂದೇ ಒಂದು ಹುಲ್ಲು ಕಡ್ಡಿಯಷ್ಟು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ಹೆಚ್.ಎನ್ ದೇವರಾಜ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಬಾಳೆಕೊಪ್ಪ ನಾಗಪ್ಪರ ಅಧ್ಯಕ್ಷತೆಯಲ್ಲಿ ಗ್ರಾಮ ಸಹಾಯಕರ ಸಭೆ ನಡೆಸಿದ್ದು ಈ ಸಭೆಯಲ್ಲಿ ಮಾತನಾಡಿದ ಅವರು, ನಾವು ಈಗಾಗಲೇ ಸೇವ ಭದ್ರತೆ ಹಾಗೂ ಕನಿಷ್ಟ ವೇತನ 27 ಸಾವಿರ ರೂಪಾಯಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದೆ. ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರಿಂದ ಸದ್ಯದಲ್ಲಿಯೇ ಗ್ರಾಮ ಸಹಾಯಕರಿಗೆ ಸಿಹಿ ಸುದ್ಧಿ ಬರಲಿದೆ ಎಂದರು.

ಕಿಡಿಗೇಡಿಗಳಿಂದ ಸಂಘ ಒಡೆಯುವ ಕೆಲಸ:

ಗ್ರಾಮ ಸಹಾಯಕರು ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಯಾವ ಬೇಡಿಕೆಯನ್ನಾದರೂ ಹೋರಾಟದ ಮೂಲಕ ಪಡೆಯಬಹುದು. ಆದರೆ ನಮ್ಮ ಸಂಘದಲ್ಲಿ ಕೆಲವರು ಸಂಘ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅವರಿಗೆ ಕಿಂಚಿತ್ತು ಬೆಲೆ ನೀಡದೇ ಸಂಘದ ಏಳಿಗೆಗಾಗಿ ದುಡಿಯಿರಿ. ನಿಮ್ಮ ಬೇಡಿಕೆಗಳನ್ನು ಸಂಘ ಸಂಘಟನೆಯ ಮೂಲಕ ಈಡೇರಿಸಿಕೊಳ್ಳಿ ಎಂದರು.

ನಾನು ರಾಜ್ಯಾಧ್ಯಕ್ಷನಾದ ಮೇಲೆ ಗ್ರಾಮ ಸಹಾಯಕರ ಅನೇಕ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದು ಗ್ರಾಮ ಸಹಾಯಕರು ವಯೋ ನಿವೃತ್ತರಾದರೆ ಅಥವಾ ಮರಣ ಹೊಂದಿದರೆ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಹಣ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ಹೆರಿಗೆ ಭತ್ಯೆ, ಹೆರಿಗೆ ರಜೆ ನೀಡಲು ಸರ್ಕಾರದಿಂದ ಕೊಡಿಸುವ ಕೆಲಸ ಮಾಡಿದ್ದೇವೆ ಎಂದರು.

27 ಸಾವಿರ ವೇತನಕ್ಕೆ ಬೇಡಿಕೆ:

ಈಗಾಗಲೇ ಸರ್ಕಾರದೊಂದಿಗೆ ಅನೇಕ ಬಾರಿ ಚರ್ಚಿಸಿ ನಮ್ಮ ಬೇಡಿಕೆಗಳಾದ ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರು ಎಂದು ಪರಿಗಣಿಸುವುದರೊಂದಿಗೆ ಕನಿಷ್ಟ ಸಂಬಳ 27 ಸಾವಿರ ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ನಾವು ಮತ್ತು ಕಂದಾಯ ಇಲಾಖೆ ತಾಯಿ ಮಕ್ಕಳಂತೆ ಕೆಲಸ ಮಾಡುತ್ತಿದ್ದೇವೆ ನಮ್ಮ ಏನೇ ಬೇಡಿಕೆಗಳಿದ್ದರೂ ಕಂದಾಯ ಇಲಾಖೆಯೊಂದಿಗೆ ಚರ್ಚಿಸಿ ಸಿಬ್ಬಂದಿಗಳೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡು ಕೆಲಸ ಮಾಡೋಣ ಎಂದರು.

ಈ ಸಭೆಯಲ್ಲಿ ಗ್ರಾಮ ಸಹಾಯಕರ ಸಂಘದ ರಾಜ್ಯ ಗೌರವಾಧ್ಯಕ್ಷ ಆದಿನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಬೆಳ್ಳೂರು ವೆಂಕಟೇಶ್, ಕೋಟೆಗೆರೆ ಗಂಗಾಧರ್, ರಾಮಣ್ಣ, ರವಿಕುಮಾರ್, ಅಶೋಕ, ನಾಗರಾಜ್, ಅಂಜತ್‌ಖಾನ್, ರಾಘು ಕಲ್ಲೂರು, ಶಂಕರ, ಶ್ರೀಧರ ಹಾಗೂ ಹೊಸನಗರ ಹಾಗೂ ಸಾಗರ ತಾಲ್ಲೂಕು ಗ್ರಾಮ ಸಹಾಯಕರು ಇನ್ನೂ ಮುಂತಾದರು ಉಪಸ್ಥಿತರಿದ್ದರು.

Leave a Comment