ಹೊಸನಗರ : ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಕುರಿತು ಫಲಾನುಭವಿಗಳು ಹೆದರುವ ಅವಶ್ಯಕತೆಯಿಲ್ಲ. ಇನ್ನೂ ಎರಡು ವರ್ಷಗಳ ಕಾಲ ಗ್ಯಾರಂಟಿ ಯೋಜನೆ ಜಾರಿಯಲ್ಲಿರುತ್ತದೆ ಎಂದು ಹೊಸನಗರ ತಾಲ್ಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಹೆಚ್.ಬಿ ಚಿದಂಬರ ಹೇಳಿದರು.
ಹೊಸನಗರದ ಗ್ಯಾರಂಟಿ ಯೋಜನಾ ಕಛೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸುದ್ಧಿ ವಾಹಿನಿಯಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಗೃಹಲಕ್ಷ್ಮಿ ಅನ್ನಭಾಗ್ಯದಂತಹ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ರದ್ದುಪಡಿಸಲು ಹೊರಟಿದೆ ಎಂದು ಸುಳ್ಳು ಸುದ್ಧಿ ಹಬ್ಬಿಸುತ್ತಿದ್ದಾರೆ. ಯಾರು ನಂಬುವ ಅವಶ್ಯಕತೆಯಿಲ್ಲ. ರಾಜ್ಯ ಕಾಂಗ್ರೆಸ್ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಸರ್ಕಾರದ ಯಾವುದೇ ಆದೇಶ ನಮ್ಮ ಕೈ ಸೇರಿಲ್ಲ ಆದೇಶ ಬರುವವರೆಗೆ ಯೋಜನೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ಸಾರ್ವಜನಿಕರು ಹಾಗೂ ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಅನ್ನಭಾಗ್ಯದಂಥಹ ಯೋಜನೆಗಳನ್ನು ಪಡೆಯುತ್ತಿರುವ ಫಲಾನುಭವಿಗಳು ಹೆದರುವ ಪ್ರಶ್ನೆಯೇ ಇಲ್ಲ ಮುಂದಿನ ದಿನದಲ್ಲಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದ್ದು. ತೆರಿಗೆ ಕಟ್ಟುವವರು, ಎಪಿಎಲ್ ಕಾರ್ಡ್ ಹೊಂದಿ ಹೆಚ್ಚಿನ ಆದಾಯ ಇರುವ ಕುಟುಂಬಗಳಿಗೆ, ಸತ್ತವರ ಹೆಸರಿನಲ್ಲಿ ಹಣ ಪಡೆಯುತ್ತಿರುವವರೆಗೆ, ಒಂದೇ ಹೆಸರಿನಲ್ಲಿ ಬೇರೆ-ಬೇರೆ ಖಾತೆಗಳಿಗೆ ಹಣ ಹಾಕಿಸಿಕೊಳ್ಳುತ್ತಿರುವರ ಗ್ಯಾರಂಟಿ ಯೋಜನೆ ರದ್ದಾಗುವ ಸೂಚನೆ ಇದೆ. ಇದರ ಜೊತೆಗೆ ಗೃಹಭಾಗ್ಯ ಯೋಜನೆಯಲ್ಲಿ ವಾಣಿಜ್ಯ ಮಳಿಗೆಗಳಿಗೆ ಉಪಯೋಗಿಸುವ ಮನೆಗಳಗೆ ಗೃಹಜ್ಯೋತಿ ಯೋಜನೆ ರದ್ದಾಗಲಿದೆ. ನಮ್ಮ ತಾಲ್ಲೂಕಿನಲ್ಲಿ ಯಾರಾದರೂ ನಿಧನ ಹೊಂದಿ ಹಣ ಪಡೆಯುತ್ತಿದ್ದರೆ ವಾಣಿಜ್ಯ ಮಳಿಗೆಗಳಿಗೆ ಗೃಹಜ್ಯೋತಿ ವಿದ್ಯುತ್ ಬಳಸುತ್ತಿದ್ದರೇ ತಕ್ಷಣ ಸಾರ್ವಜನಿಕರು ತಿಳಿಸಬೇಕೆಂದು ಈ ಮೂಲಕ ಕೇಳಿಕೊಂಡರು.
ಕೆಎಸ್ಆರ್ಟಿಸಿ ಬಸ್ ಸೌಲಭ್ಯ ವಿದ್ಯಾರ್ಥಿಗಳಿಗೂ ಅನ್ವಯ:
ಸರ್ಕಾರದ ಗ್ಯಾರಂಟಿಯ ಯೋಜನೆಯ ಒಂದು ಭಾಗವಾದ ಶಕ್ತಿ ಯೋಜನೆ ಹೊಸನಗರ ತಾಲ್ಲೂಕಿನಲ್ಲಿ ಸರ್ಕಾರಿ ಬಸ್ಗಳ ಸಂಚಾರ ವಿರಳವಾಗಿರುವುದರಿಂದ ತಕ್ಷಣ ಜಾರಿಗೆ ಬರುವಂತೆ ಕೆಎಸ್ಆರ್ಟಿಸಿ ಡಿಪೋ ಹೊಸನಗರದಲ್ಲಿ ತೆರೆಯಬೇಕು ಹಾಗೂ ಸಾಗರ – ಶಿವಮೊಗ್ಗ – ತೀರ್ಥಹಳ್ಳಿ- ಕುಂದಾಪುರ ಮಾರ್ಗಕ್ಕೆ ಕೆಂಪು ಬಸ್ಗಳನ್ನು ಬಿಡಬೇಕೆಂದು ಈಗಾಗಲೇ ಸರ್ಕಾರದ ಹಾಗೂ ಶಾಸಕರ ಗಮನಕ್ಕೆ ತಂದಿದ್ದೇವೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯಲ್ಲಿ ನಮ್ಮ ಸರ್ಕಾರ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ ಎಂದರು.
ಮೂರು ನ್ಯಾಯಬೆಲೆ ಅಂಗಡಿಗಳಿಗೆ ಸದಸ್ಯ ಉಸ್ತುವಾರಿ :
ಹೊಸನಗರ ತಾಲ್ಲೂಕಿನಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರದಲ್ಲಿ ಜನರಿಗೆ ವ್ಯತ್ಯಾಸ ಮಾಡಲಾಗುತ್ತಿದೆ. ಸರಿಯಾದ ಅಕ್ಕಿ ನೀಡುತ್ತಿಲ್ಲ ಎಂದು ದೂರುಗಳ ಬಂದ ಕಾರಣದಿಂದ ಪ್ರತಿಯೊಂದು ಗ್ರಾಮ, ಹೋಬಳಿಗಳಲ್ಲಿ ಮೂರು-ಮೂರು ನ್ಯಾಯಬೆಲೆ ಅಂಗಡಿಗಳಿಗೆ ಒಬ್ಬರಂತೆ ಗ್ಯಾರಂಟಿ ಯೋಜನೆಯ ಸದಸ್ಯರನ್ನ ಈಗಾಗಲೇ ನೇಮಿಸಲಾಗಿದೆ. ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 29011 ಪಡಿತರ ಕಾರ್ಡ್ದಾರರಿದ್ದು ಅದರಲ್ಲಿ 28522 ಕಾರ್ಡ್ ಗ್ಯಾರಂಟಿ ಯೋಜನೆಗೆ ಭಾಗಿನರಾಗಿದ್ದಾರೆ. ಇತ್ತೀಚೆಗೆ 56 ಮಹಿಳೆಯರು ಹೊಸ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸಲಾಗಿದ್ದು 36 ಮಹಿಳೆಯರು ಗ್ಯಾರಂಟಿ ಯೋಜನೆಗೆ ನೊಂದಾವಣೆ ಮಾಡಲಾಗಿದೆ ಎಂದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





