ಹೊಸನಗರ ; ಸಮಾಜದ ಸಂಘಟನೆಯೊಂದಿಗೆ ಹೊಸನಗರ ತಾಲ್ಲೂಕಿನಲ್ಲಿ ಹಿಂದುಳಿದ ಈಡಿಗ ದೀವರ ಶ್ರೇಯೋಭಿವೃದ್ದಿಗಾಗಿ ಸ್ಥಾಪಸಿದ ಹೊಸನಗರ ತಾಲ್ಲೂಕಿನ ಆರ್ಯ ಈಡಿಗರ ಸಂಘದಲ್ಲಿ ಬಾರಿ ಅವ್ಯವಹಾರ ನಡದಿದೆ. ಸಂಘದ ಹಾಲಿ ಅಧ್ಯಕ್ಷ ಬಂಡಿ ರಾಮಚಂದ್ರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ, 95 ವರ್ಷದ ಹಿರಿಯ ಚೇತನ ಬಿ.ಸ್ವಾಮಿರಾವ್ ಇದೇ ಡಿಸೆಂಬರ್ 26 ರಿಂದ ಹೊಸನಗರ ಈಡಿಗರ ಸಂಘದ ಆವರಣದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುವುದಾಗಿ ಘೋಷಿಸಿದರು.
ಸೊನಲೆ ಗ್ರಾಮದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನಾನು ಕಟ್ಟಿ ಬೆಳೆಸಿದ ಸಂಘದಲ್ಲಿನ ದುರಾಡಳಿತ ದುರ್ವರ್ಥನೆ ಅವ್ಯವಹಾರ ನೋಡಿ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಂಘದಲ್ಲಿನ ಅವ್ಯವಹಾರವನ್ನು ಖಂಡಿಸಿ ಉಪವಾಸ ಸತ್ಯಾಗ್ರಹ ನಡೆಸುವುದರೊಂದಿಗೆ ಸಂಘದ ಸಮಾಜದ ನ್ಯಾಯಕ್ಕಾಗಿ ನಡೆಸುವ ಈ ಹೋರಾಟದಿಂದ ನನ್ನ ಜೀವಕ್ಕೆ ಕುತ್ತು ಬಂದರೂ ಬರಬಹುದು ನಾನು ಅಂಜದೆ ಧೈರ್ಯವಾಗಿ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ ಅವರು, ನನ್ನ ಪತ್ನಿಯ ಸಾವಿಗೆ ಸಂಘದ ಅಧ್ಯಕ್ಷ ಬಂಡಿ ರಾಮಚಂದ್ರ ಮತ್ತು ಉಪಾಧ್ಯಕ್ಷ ಎರಗಿ ಉಮೇಶ್ ಇವರುಗಳೇ ನೇರ ಹೊಣೆಯಾಗಿದ್ದು ಅದೇ ಕೊರಗಿನಿಂದಾಗಿ ನನ್ನ ಪತ್ನಿ ಸಾವನ್ನಪ್ಪಿದ್ದಾಳೆಂದು ಕಣ್ಣೀರು ಹಾಕಿ ಮನದಾಳದ ನೋವನ್ನು ಪತ್ರಕರ್ತರೆಂದುರು ತೋಡಿಕೊಂಡರು.
ದೀವರ ಜನಾಂಗದ ಅಭಿವೃದ್ದಿಗೆ ನೆರವಾಗಬೇಕೆಂಬ ಉದ್ದೇಶದೊಂದಿಗೆ ಸಂಘವನ್ನು ಪ್ರಾಮಾಣಿಕವಾಗಿ ಬೆಳೆಸಿದೆ. ಹೊಸನಗರದ ಹೃದಯ ಭಾಗದಲ್ಲಿ ಸಂಘದ ಮನೆಯ ಆವರಣದಲ್ಲಿ ಸುಂದರವಾದ ಕಾಂಪ್ಲೆಕ್ಸ್ ಅನ್ನು ನನ್ನ ಸ್ವಂತ ಆಸ್ತಿ, ಮನೆಯನ್ನು ಅಡವಿಟ್ಟು ಆ ಹಣದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿಲು ಶ್ರಮಿಸಿದೆ. ಆಗ ಸಮಾಜ ಕೆಲವು ಕಿಡಿಗೇಡಿಗಳು ನನ್ನ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿ ಕೆಟ್ಟ ಹೆಸರು ತರುವ ಪ್ರಯತ್ನ ನಡೆಸಿದರು. ಇದರಿಂದ ನಾನು ಮನನೊಂದು ಸಂಘದ ಆಡಳಿತವನ್ನು ಬಂಡಿ ರಾಮಚಂದ್ರ ಎಂಬುವನಿಗೆ ಕಳೆದ 20 ವರ್ಷದ ಹಿಂದೆ ಹಸ್ತಾಂತರ ಮಾಡಿದ್ದೆ ಎಂದು ವಿವರಿಸಿದರು.
ಯಾವ ಸೌಲಭ್ಯವನ್ನು ಅಪೇಕ್ಷಿಸದೆ ಸಂಘದ ಎಲ್ಲಾ ಜವಾಬ್ದಾರಿಗಳನ್ನು ಸಮಾಜದ ಹಿತದೃಷ್ಠಿಯಿಂದ ವರ್ಗಾಯಿಸಿದೆ. 2007 ರಿಂದ ಸಂಘದ ವಾರ್ಷಿಕ ಸಭೆ ಕರೆಯದೆ ಲೆಕ್ಕಪತ್ರವನ್ನು ಮಂಡಿಸದೆ ನಕಲಿ ಖಾತೆ ತೆರೆದು ವ್ಯವಹರಿಸಲಾಗುತ್ತಿದೆ. ಈವರೆಗೂ ಸಂಘದ ಕಾಂಪ್ಲೆಕ್ಸ್ ಬಾಡಿಗೆ ಬಾಬ್ತು 20 ವರ್ಷಕ್ಕೆ 2.40 ಕೋಟಿ ರೂ.ಗಳು ಆದಾಯ ಬಂದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ನಾನು ಶ್ರಮವಹಿಸಿ ಕಟ್ಟಿ ಬೆಳೆಸಿದ ಸಂಘದ ಸಮಾಜಕ್ಕೆ ಉಳಿಯಬೇಕು. ಭ್ರಷ್ಟರ ಕೈಗೊಂಬೆ ಆಗಬಾರದು ಎಂಬ ಸದ್ದುದ್ದೇಶದಿಂದಾಗಿ ಈ ಧರಣಿಯನ್ನು ನಡೆಸಲು ಮುಂದಾಗಿದ್ದೇನೆಂದು ಹೇಳಿದರು.

ಅಲ್ಲದೆ ಕಳೆದ ಮೂರು ತಿಂಗಳ ಹಿಂದೆಯೇ ನಾನು ಸಂಘದಲ್ಲಿನ ಅವ್ಯವಹಾರದ ಬಗ್ಗೆ ಡಿಸೆಂಬರ್ 31 ರಂದು ಅಮರಣಾಂತ ಉಪವಾಸ ನಡೆಸುವುದಾಗಿ ಘೋಷಣೆ ಮಾಡಲಾದರೂ ಕೂಡಾ ಈಗ ಎರಡು ವರ್ಷದ ಹಿಂದೆ ಲೋಕಾರ್ಪಣೆಯಾಗಿರುವ ಸಂಘದ ಹಳೆಯ ಕಟ್ಟಡವನ್ನು ಈಗ ಏಕಾಏಕಿ ಡಿಸೆಂಬರ್ 26 ರಂದು ಮರು ಉದ್ಘಾಟನೆ ಮಾಡುವ ಹುನ್ನಾರ ನಡೆಸಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಈಗಾಗಲೇ ಸಂಘದಲ್ಲಿ ನಡೆದಿರುವ ಅವ್ಯವಹಾರವನ್ನು ವಿರೋಧಿಸಿ ಕಪ್ಪುಪಟ್ಟಿ ಪ್ರದರ್ಶನ ಮತ್ತು ಪ್ರತಿಭಟನೆಗಳು ನಡೆದಿರುವುದನ್ನು ಸ್ಮರಿಸುತ್ತಾ, ಹೀಗೆಯೇ ಮುಂದುವರೆದರೆ ಸಂಘ ಮುಂದೆ ಮುಚ್ಚುವ ಹಂತ ತಲುಪುವುದರಲ್ಲಿ ಎರಡು ಮಾತಿಲ್ಲ ಎಂದು ಪುನರುಚ್ಛರಿಲಿದ ಅವರು, ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಿಗೂ ಹಾಗೂ ಈಡಿಗ ಸಮಾಜದ ಗುರುಗಳ ಗಮನಕ್ಕೂ ಪತ್ರ ಮೂಲಕ ತರಲಾಗಿದೆ ಎಂದು ವಿವರಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





